Decision to drop anti-people provisions from the Kasturirangan Report.
- ವರದಿ ವಾಸ್ತವಕ್ಕೆ ದೂರ
-ಸಂಸದ ರಾಘವೇಂದ್ರ ಮನವಿ । ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ, ಮೇಲ್ವಿಚಾರಣಾ ಸಮಿತಿ ಸಭೆಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು ಗುರುತಿಸಲಾಗಿರುವ ಭೂಮಿಯನ್ನು ಹೊರತುಪಡಿಸಿ, ಉಳಿದಂತೆ ಜನವಸತಿ ಪ್ರದೇಶ, ರೈತರು ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿ, ವನವಾಸಿಗಳು ವಾಸಿಸುವ ಪ್ರದೇಶಗಳನ್ನು ಕೈಬಿಟ್ಟು ನಿರ್ಣಯ ಕೈಗೊಳ್ಳುವಂತೆ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಕಸ್ತೂರಿ ರಂಗನ್ ಸಮಿತಿಯ ವರದಿಯು ಸ್ಥಳೀಯ ಜನರ ಅಹವಾಲು ಆಲಿಸದೆ, ಸ್ಥಳೀಯವಾಗಿರುವ ವಾಸ್ತವ ಸ್ಥಿತಿಗತಿ ಅರಿಯದೇ ಮಾಡಿದ ವರದಿ ಇದಾಗಿದೆ. ಕಸ್ತೂರಿರಂಗನ್ ಸಮಿತಿಯ ಶಿಫಾರಸು ಆಧಾರದ ಮೇಲೆ ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಸರ್ಕಾರದ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ ರಾಜ್ಯದ ಒಟ್ಟು 20,668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದ್ದು, ಜಿಲ್ಲೆಯ ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಮತ್ತು ತೀರ್ಥಹಳ್ಳಿ ತಾಲೂಕಿನ 447 ಗ್ರಾಮಗಳು ವರದಿಯಲ್ಲಿವೆ ಎಂದು ತಿಳಿಸಿದರು.
ಜಿಲ್ಲೆಯ ದೊಡ್ಡ ಪ್ರಮಾಣದ ಮಲೆನಾಡು ಪ್ರದೇಶ ಈ ಚರ್ಚೆಯ ಕೇಂದ್ರದಲ್ಲಿದೆ. ಮಲೆನಾಡಿನಲ್ಲಿ ಬಹುತೇಕ ಕುಟುಂಬಗಳ ಆರ್ಥಿಕ ಜೀವನ ಅಡಿಕೆ, ಕಾಫಿ, ಮೆಣಸು, ತೆಂಗು, ಭತ್ತ ಮುಂತಾದ ಕೃಷಿ ಮತ್ತು ತೋಟಗಾರಿಕೆ ಮೇಲೆ ಅವಲಂಬಿತವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಅನುಷ್ಠಾನಕ್ಕೆ ಬಂದಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದ ಜಮೀನು, ಮನೆ-ಮಠ ಕಟ್ಟಿಕೊಂಡವರು ಬದುಕು ಸಾಗಿಸುವುದು ಹೇಗೆ ಎಂಬ ಆತಂಕ ರೈತರಲ್ಲಿದೆ ಎಂದರು.ಮಲೆನಾಡಿನ ಗ್ರಾಮಗಳಲ್ಲಿ ಕುಟುಂಬಗಳು ತಮ್ಮದೇ ಜಮೀನಿನಲ್ಲಿ ಮನೆ ಕಟ್ಟುವುದು ಸಾಮಾನ್ಯ. ದೊಡ್ಡ ಕಟ್ಟಡ ಮತ್ತು ಟೌನ್ಶಿಪ್ ಯೋಜನೆಗಳಿಗೆ ಕರಡು ಅಧಿಸೂಚನೆಯಲ್ಲಿ ನಿರ್ಬಂಧಗಳಿವೆ. ಇದೂ ಕೂಡ ಜನರಲ್ಲಿನ ಆತಂಕಕ್ಕೆ ಕಾರಣವಾಗಿದೆ.
ಕಸ್ತೂರಿರಂಗನ್ ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ತರುವ ಮುನ್ನ ಕೆಲವು ಮಾರ್ಪಾಡುಗಳನ್ನು ಅಗತ್ಯವಾಗಿ ಮಾಡಿಕೊಳ್ಳಲೇಬೇಕಾಗಿದೆ.ಜನರು, ಅರಣ್ಯದಲ್ಲಿನ ವನವಾಸಿಗಳು ಹಲವು ದಶಕಗಳಿಂದ ಬದುಕು ಕಟ್ಟಿಕೊಂಡಿರುವುದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು.
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1932ಕ್ಕೂ ಮುಂಚೆ ಭೂಸ್ವಾಧೀನ ಪಡೆದುಕೊಂಡ ಜಮೀನನ್ನು ಕೂಡ ಅರಣ್ಯ ಭೂಮಿ ವ್ಯಾಪ್ತಿಗೆ ಸೇರಿಸಿ ವರದಿ ನೀಡಿರುವುದು ಸರಿಯಲ್ಲ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಒ ಎನ್. ಹೇಮಂತ್, ಎಸ್ಪಿ ಬಿ.ನಿಖಿಲ್ ಸೇರಿದಂತೆ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್...ಮಲೆನಾಡಿನ ಜನವಸತಿ ಪ್ರದೇಶಗಳನ್ನು ESA ವ್ಯಾಪ್ತಿಯಿಂದ ಹೊರಗಿಡಬೇಕು. ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆಗೆ ಸಂಪೂರ್ಣ ರಕ್ಷಣೆ ನೀಡಬೇಕು. ರೈತರ ಸಾಮಾನ್ಯ ಮನೆ ನಿರ್ಮಾಣಕ್ಕೆ ಅನಗತ್ಯ ನಿರ್ಬಂಧ ಇರಬಾರದು. ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಕುಡಿವ ನೀರು, ವಿದ್ಯುತ್ ಮುಂತಾದ ಮೂಲ ಯೋಜನೆಗಳಿಗೆ ವಿಶೇಷ ವಿನಾಯಿತಿ ಇರಬೇಕು. ಗ್ರಾಮವಾರು ಮಾತ್ರವಲ್ಲದೆ ಭೂಮಿಯ ವಾಸ್ತವಿಕ ಸ್ಥಿತಿ ಪರಿಶೀಲಿಸಿ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಮರುಸರ್ವೆ ನಡೆಸಬೇಕು. ಕಾಡು ಪ್ರದೇಶ, ನದಿ ಮೂಲ ಮತ್ತು ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ಮಾತ್ರ ಕಟ್ಟುನಿಟ್ಟಾಗಿ ರಕ್ಷಿಸಬೇಕು. ಸ್ಥಳೀಯ ಗ್ರಾಮಸ್ಥರು, ರೈತರು, ಜನಪ್ರತಿನಿಧಿಗಳು ಮತ್ತು ತಜ್ಞರನ್ನು ಒಳಗೊಂಡ ಸಾರ್ವಜನಿಕ ಸಮಾಲೋಚನೆ ನಡೆಸಬೇಕು.
– ಆರಗ ಜ್ಞಾನೇಂದ್ರ, ಶಾಸಕ.-------------
ಪೋಟೊ: 11ಎಸ್ಎಂಜಿಕೆಪಿ11ಶಿವಮೊಗ್ಗದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.