ಅಂಬೇಡ್ಕರ್‌ ಭಾರತದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿ: ಜಕ್ಕಪ್ಪನವರ

| Published : Jan 03 2025, 12:30 AM IST

ಸಾರಾಂಶ

ಜಗತ್ತಿನ ಎಲ್ಲಿಯೇ ಇದ್ದರೂ ಡಾ. ಬಿ.ಆರ್ ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ ಯೋಧರಿಗೆ ಗೌರವಾರ್ಪಣೆ ಮಾಡುತ್ತಿದ್ದರು. ಅವರು ಹೋರಾಟ ಮೂಲಕ ಸಮಾಜಕ್ಕೆ ಹಕ್ಕು ಕೊಡಿಸಿದ್ದಾರೆ. ಅಂತಹ ಛಲ ಹಾಗೂ ಬಲ ನಮಗೆಲ್ಲರಿಗೂ ಬರಬೇಕು.

ಧಾರವಾಡ:

ಇಲ್ಲಿಯ ಬುದ್ಧರಕ್ಕಿಥ ಪ್ರೌಢಶಾಲೆಯ ಆವರಣದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವದ ಪ್ರಯುಕ್ತ ಕೋರೆಗಾಂವ ವೀರ ಯೋಧರಿಗೆ ಗೌರವ ಸಮರ್ಪಣೆ ನಡೆಯಿತು.

ಈ ವೇಳೆ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಷನಲ್ ಆ್ಯಂಡ್‌ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ. ಎಚ್.ಎಫ್. ಜಕ್ಕಪ್ಪನವರ, ಭೀಮಾ ಕೋರೆಗಾಂವ ಯುದ್ಧವು ಐತಿಹಾಸಿಕ ನಿರ್ಣಯವನ್ನು ತಂದುಕೊಟ್ಟಿತು. ಈ ಹೋರಾಟವು ಇತಿಹಾಸದಲ್ಲಿ ಪೌರಾಣಿಕ ಸ್ಥಾನಮಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹಳ್ಳಿ-ಹಳ್ಳಿಗಳಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವದ ಚರ್ಚೆ ನಡೆಯುತ್ತಿದೆ ಎಂದರು.

ಜಗತ್ತಿನ ಎಲ್ಲಿಯೇ ಇದ್ದರೂ ಡಾ. ಬಿ.ಆರ್ ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ ಯೋಧರಿಗೆ ಗೌರವಾರ್ಪಣೆ ಮಾಡುತ್ತಿದ್ದರು. ಅವರು ಹೋರಾಟ ಮೂಲಕ ಸಮಾಜಕ್ಕೆ ಹಕ್ಕು ಕೊಡಿಸಿದ್ದಾರೆ. ಅಂತಹ ಛಲ ಹಾಗೂ ಬಲ ನಮಗೆಲ್ಲರಿಗೂ ಬರಬೇಕು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ಹಿರಿಯ ಸಮಾಜ ಸೇವಕಿ ಸುಶೀಲಮ್ಮ ಚಲವಾದಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಕೆ. ಹಲಗಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಶಿಕ್ಷಣಾಧಿಕಾರಿ ಬಿಕೆಎಸ್‌ ವರ್ಧನ್, ಯಲ್ಲಪ್ಪ ಮಂಟೂರ, ರಾಜು ಕೋಟೆಣ್ಣವರ, ಸಂತೋಷ ಜಕ್ಕಪ್ಪನವರ, ಜಿ.ಎಚ್. ನಾಗಾವಿ, ಕೆ.ಜಿ. ಆಡೂರ ಇದ್ದರು. ನಂತರ ಸದಾಶಿವ ಮರ್ಜಿ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬುದ್ಧರಕ್ಕಿಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ, ಕೋರೆಗಾಂವ ವೀರ ಯೋಧರಿಗೆ ಗೌರವ ಸಮರ್ಪಣೆ ಸಲ್ಲಿಸಿದರು.