ಕುಂದಗೋಳ:

ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಹಾಗೂ ಎಸ್‌ಐಆರ್‌ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಅಂಜುಮನ್‌ ಏ- ಇಸ್ಲಾಂ ಸಂಸ್ಥೆ ಹಾಗೂ ಮುಸ್ಲಿಮರು ಪ್ರತಿಭಟನೆ ನಡೆಸಿದರು. ತಹಸೀಲ್ದಾರ್‌ ಕಚೇರಿ ಬಳಿ ಜಮಾವಣೆಗೊಂಡ ಮುಸ್ಲಿಮರು, ಈ ಸಂಬಂಧ ತಹಸೀಲ್ದಾರ್‌ ರಾಜು ಮಾವರಕರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಿವೃತ್ತ ಶಿಕ್ಷಕ ಎನ್.ಎಫ್. ನದಾಫ್, ಗೋಮಾಂಸ ಬಳಕೆ ಕುರಿತು ಮುಸ್ಲಿಮರ ವಿರುದ್ಧ ಕೆಲವು ವದಂತಿ ಹರಡಿಸಲಾಗುತ್ತಿದೆ. ಎಲ್ಲವೂ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನೇ ಮಾಡಲಾಗುತ್ತಿದೆ. ಗೋಮಾಂಸವನ್ನು ಮುಸ್ಲಿಮರೇ ಹೆಚ್ಚು ಬಳಸುತ್ತಾರೆ ಎಂಬ ಆರೋಪ ಆಧಾರ ರಹಿತ. ಗೋಮಾಂಸದ ಆಮದು-ರಫ್ತು ಕಾರ್ಯದಲ್ಲಿ ವಿವಿಧ ವರ್ಗದ ಜನರು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಈ ಬಗ್ಗೆ ಗಮನಹರಿಸಿ ಗೋಮಾತೆಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ಲೋಪದೋಷ ಕಂಡು ಬರುತ್ತಿದ್ದು, ಅವುಗಳನ್ನು ಸರಿಪಡಿಸಿ ಮರುಪರಿಶೀಲನೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಹಜರತಲಿ ಜೋಡಮನಿ, ಖಯುಂ ನಾಲಬಂಧ, ರಾಯೇಸಾಬ್ ಕಳ್ಳಿಮನಿ, ಎ.ಟಿ. ಹುಬ್ಬಳ್ಳಿ, ಸಲೀಂ ಕ್ಯಾಲಕೊಂಡ, ಮಲಿಕ್ ಶಿರೂರು, ಮಾಬುಲಿ ನದಾಫ್, ನಾಸಿರ್ ಬಾಣಿ, ರಫೀಕ್ ಶೆರೆವಾಡ, ಹಜರತಲಿ ಕರ್ಜಗಿ, ಜಾಫರ್‌ಸಾಬ್ ಪಠಾನ್, ಎಂ.ಎಚ್. ಕಳ್ಳಿಮನಿ, ಬಾಬಾಜಾನ್ ಮಿಶ್ರಿಕೋಟಿ, ವಲಿವುಲ್ಲಾ ಮುಲ್ಲಾ, ಹುಸೇನ್ ಹುಬ್ಬಳ್ಳಿ, ಎಂ.ಎಂ. ಜಂಗ್ಲಿ, ಇರ್ಷಾದ್ ಅಹಮ್ಮದ್ ಮುಲ್ಲಾ, ಅಲ್ಲಾಭಕ್ಷ ಅಣ್ಣಿಗೇರಿ, ಬಂದಗಿಸಾಬ್ ಬಂದಗಿಸಾಬನವರ, ಶರೀಫ್‌ಸಾಬ್ ನದಾಫ್, ದಸ್ತಗೀರಸಾಬ್ ಕಾಳಾ, ಅಯೂಬ್ ಕಲೆಗಾರ ಸೇರಿದಂತೆ ಹಲವರಿದ್ದರು.