ಸಾರಾಂಶ
ಚಿಂಚೋಳಿ : ತಾಲೂಕಿನ ಸರಕಾರ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದರಿಂದ ಅಭಿವೃದ್ದಿಕಾರ್ಯಗಳು ಕುಂಠಿತಗೊಂಡಿವೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.ಸರಕಾರ ಹಿಂದುಳಿದ ಪ್ರದೇಶದ ಸರಕಾರಿ ಶಾಲೆಗಳಿಗೆ ಶ್ರೀಘ್ರವಾಗಿ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕೆಂದು ಸಮಾಜ ಸೇವಕ ರವಿಶಂಕರರೆಡ್ಡಿ ಮುತ್ತಂಗಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ತಾಲೂಕಿನ ಅನೇಕ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಹುದ್ದೆಗಳು ಖಾಲಿ ಆಗಿವೆ. ಸರಕಾರ ಇನ್ನುವರೆಗೆ ಖಾಲಿ ಇರುವ ಹುದ್ದೆಗಳು ಭರ್ತಿಗೊಳಿಸದೇ ಇರುವುದರಿಂದ ಹಳ್ಳಿಯಲ್ಲಿ ಜನರ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲ ತಾಲೂಕಿನಲ್ಲಿ ೫೪೨ಪ್ರಾಥಮಿಕ ಸಹಶಿಕ್ಷಕರು೯೭ಪ್ರೌಢ ಶಾಲೆ ಶಿಕ್ಷಕರ ಹುದ್ದೆಗಳು ಖಾಲಿ ಇವೆ ೪೨ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ.ಇದರಿಂದಾಗಿ ತಾಲೂಕಿನ ಹಳ್ಳಿಯ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.ನಮ್ಮ ಭಾಗದಲ್ಲಿ ಶಿಕ್ಷಕರ ನೇಮಕಾತಿ ಆದನಂತರ ತಮ್ಮ ಜಿಲ್ಲೆಗಳಿಗೆ ವರ್ಗಾವಣೆಗೊಳ್ಳುತ್ತಿರುವುದರಿಂದ ನಮ್ಮ ತಾಲೂಕಿನಲ್ಲಿ ಶಿಕ್ಷಕರ ಸಮಸ್ಯೆ ಉಂಟಾಗುತ್ತಿದೆ ಇದರಿಂದಾಗಿ ಫಲಿತಾಂಶ ಕುಸಿಯುತ್ತಿದೆ.
ತಾಲೂಕಿನ ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಚಿಂಚೋಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರ, ಪ್ರಯೋಜತಜ್ಞರ ಹುದ್ದೆಗಳು ಖಾಲಿ ಇವೆ.ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರು ಚಿಂಚೋಳಿ ತಾಲೂಕವನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.ಸರಕಾರ ಕೂಡಲೇ ರೈತರ ಖಾತೆಗಳಿಗೆ ಪರಿಹಾರವನ್ನು ನೀಡಬೇಕು ಸಮಾಜ ಸೇವಕ ರವಿಶಂಕರರೆಡ್ಡಿ ಮುತ್ತಂಗಿ ಹೇಳಿದರು.