ಅಕ್ಟೋಬರ್‌ 2 ರಂದು ಗಾಂಧಿ ಭವನ ಲೋಕಾರ್ಪಣೆ: ಸಚಿವ

| Published : Sep 22 2024, 01:47 AM IST

ಸಾರಾಂಶ

ಗಾಂಧಿ ಭವನ ಎಲ್ಲರಿಗೂ ಉಪಯುಕ್ತವಾಗಲಿದ್ದು, ಗಾಂಧೀಜಿಯವರ ಜೀವನ ಚರಿತ್ರೆಯನ್ನು ಬಿಂಬಿಸುವಂತೆ ಈಗಾಗಲೇ ಇಲ್ಲಿ ನಿರ್ಮಿಸಿರುವ ಛಾಯಾಚಿತ್ರ ಗ್ಯಾಲರಿಯನ್ನು ಪ್ರತಿಯೊಬ್ಬರು ವೀಕ್ಷಿಸಲು ಉತ್ತೇಜಿಸಲಾಗುವುದು. ಛಾಯಾಚಿತ್ರ ಗ್ಯಾಲರಿಯಯಲ್ಲಿ ಅಪರೂಪದ ಚಿತ್ರಗಳಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನವನ್ನು ಇದೇ ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನದಂದು ಲೋಕಾರ್ಪಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಾಂಧಿ ವಿಚಾರಧಾರೆಗಳ ಮಾಹಿತಿ

ಸುಮಾರು ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಂಧೀ ಭವನವನ್ನು ಲೋಕಾರ್ಪಣೆ ಮಾಡಿ ಗಾಂಧೀಜಿವರ ವಿಚಾರ ದಾರೆಗಳು ಹಾಗೂ ತತ್ವಾದರ್ಶಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಯವರೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವುದು ಈ ನಿಟ್ಟಿನಲ್ಲಿ ಈ ಭವನ ಉಪಯುಕ್ತವಾಗಲಿದ್ದು, ಗಾಂಧೀಜಿಯವರ ಜೀವನ ಚರಿತ್ರೆಯನ್ನು ಬಿಂಬಿಸುವಂತೆ ಈಗಾಗಲೇ ಇಲ್ಲಿ ನಿರ್ಮಿಸಿರುವ ಛಾಯಾಚಿತ್ರ ಗ್ಯಾಲರಿಯನ್ನು ಪ್ರತಿಯೊಬ್ಬರು ವೀಕ್ಷಿಸಲು ಉತ್ತೇಜಿಸಲಾಗುವುದು ಎಂದು ಸಚಿವರು ಹೇಳಿದರು.

ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ತೆರೆಯಲು ಯೋಜಿಸಲಾಗಿದೆ. ಖಾದಿ ಉತ್ಪನ್ನ ತಯಾರಿಕರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಕನ್ನಡಭವನ ನಿರ್ಮಾಣ

ಎಂ.ಜಿ ರಸ್ತೆಯ ಅಗಲೀಕರಣದ ಕಾರ್ಯಕ್ಕೆ ಸ್ಥಳೀಯ ನಾಗರಿಕರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತ ಸಹಕಾರ ನೀಡುತ್ತಿರುವುದಕ್ಕೆ ಧನ್ಯವಾದ ತಿಳಿಸಿದ ಸಚಿವರು. ಜಿಲ್ಲಾ ಕನ್ನಡ ಭವನ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಈಗಾಗಲೇ 6.50 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ ಇನ್ನುಳಿದ ಬಾಕಿ ಅನುದಾನವನ್ನು ತಂದು ಈ ವರ್ಷದ ಅಂತ್ಯದೊಳಗೆ ಭವನದ ಲೋಕಾರ್ಪಣೆ ಮಾಡುವ ಕೆಲಸವಾಗುತ್ತದೆ ಎಂದರು.

ಈ ವೇಳೆಯಲ್ಲಿ ಶಾಸಕರಾದ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ತಹಸಿಲ್ದಾರ್ ಅನಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುoಜಣ್ಣ, ಯೋಜನಾ ಅಭಿಯಂತರ ನವೀನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.