ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಶಿವಮೊಗ್ಗ, ಚಿಕ್ಕಮಗಳೂರು ಈ ಎರಡು ಜಿಲ್ಲಾ ಮಟ್ಟದಲ್ಲಿರುವ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ಸುಮಾರು ₹3 ಕೋಟಿ ವೆಚ್ಚದಲ್ಲಿ ಪಟ್ಟಣದ ಕುರುವಳ್ಳಿಯಲ್ಲಿ ನಿರ್ಮಾಣಗೊಂಡಿರುವ ಆರ್ಎಸ್ಬಿ ಸಮುದಾಯ ಭವನ ಅ. 23 ರಂದು ಬೆಳಗ್ಗೆ 10.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಮಾಜದ ಅಧ್ಯಕ್ಷೆ ಸುಮಾ ರಾಮಚಂದ್ರ ಬೋರ್ಕಾರ್ ಹೇಳಿದರು.ಗೋವಾದಲ್ಲಿರುವ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಯವರ ಸಾನಿಧ್ಯದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಭವನದ ವೇದಿಕೆಗೆ ಪ್ರಮುಖ ದಾನಿಗಳಾದ ವಿಶ್ವೇಶ್ವರ ಕಾಮತ್ ಹೆಸರನ್ನು ಹಾಗೂ ಭೋಜನ ಶಾಲೆಗೆ ಸಂಘದ ಸ್ಥಾಪಕ ಅಧ್ಯಕ್ಷರಾದ ರಾಮಚಂದ್ರ ಬೋರ್ಕಾರ್ ಹೆಸರನ್ನಿಡಲು ತೀರ್ಮಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಕಟ್ಟಡದ ನಿರ್ಮಾಣದಲ್ಲಿ ಸಮಾಜ ಬಾಂಧವರ ಮತ್ತು ಸಂಘದ ಗೌರವಾಧ್ಯಕ್ಷ ಉದ್ಯಮಿ ನಟರಾಜ ಕಾಮತ್ರವರ ಪೂರ್ಣ ಪ್ರಮಾಣದ ನೆರವಿದೆ. ಹಾಗೂ ಸಂಸದರು ಮತ್ತು ಸ್ಥಳೀಯ ಶಾಸಕರ ನೆರವಿನಿಂದ ನೀರಾವರಿ ನಿಗಮದಿಂದ ದೊರೆತ ₹50 ಲಕ್ಷ ಅನುದಾನ ನೆರವಿಗೆ ಬಂದಿದೆ. ಆರ್ ಎಸ್ ಬಿ ಸಮಾಜ ಮಾತ್ರವಲ್ಲದೇ ಊರಿನ ಎಲ್ಲಾ ಸಾಮಾಜಿಕ ಕಾರ್ಯಗಳಿಗೂ ಈ ಭವನ ತೆರೆದುಕೊಳ್ಳಲಿದೆ ಎಂದೂ ಹೇಳಿದರು.ಸಂಘದ ಕಾರ್ಯದರ್ಶಿ ಅಶೋಕ್ ನಾಯಕ್, ಸಹ ಕಾರ್ಯದರ್ಶಿ ಎಚ್.ಎನ್. ರಾಘವೇಂದ್ರ, ನಿರ್ದೆಶಕರಾದ ವಿಶ್ವನಾಥ ಪ್ರಭು, ರಾಘವೇಂದ್ರ ನಾಯಕ್, ಟಿ.ಎಂ. ರಾಘವೇಂದ್ರ, ಸುಧಾ ಸುರೇಶ್, ರಾಘವೇಂದ್ರ ನಾಯಕ್ ಮುಂತಾದವರು ಇದ್ದರು.