ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಗಲಕೋಟೆಯ ಉದ್ಯಮಿ ಕುಟುಂಬಸ್ಥರು ಸೇವಾರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ನೂತನ ಬೆಳ್ಳಿಪಲ್ಲಕಿ ಭಾನುವಾರ ಕ್ಷೇತ್ರಕ್ಕೆ ಆಗಮಿಸಿತು. ಭವ್ಯ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಕುಕ್ಕೆ ಪುರಪ್ರವೇಶಿಸಿತು.ದೇವಳದ ಆನೆ ಯಶಸ್ವಿ ಈ ಸಂದರ್ಭ ನೂತನ ಪಲ್ಲಕಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿತು. ಬಳಿಕ ಕಾಶಿಕಟ್ಟೆಯಿಂದ ಭಕ್ತಿಪೂರ್ವಕವಾದ ಭವ್ಯ ಮೆರವಣಿಗೆ ಆರಂಭವಾಯಿತು.
ಆನೆ, ಬಿರುದಾವಳಿ, ಮಂಗಳವಾದ್ಯ ಮತ್ತು ಸಿಂಗಾರಿ ಮೇಳದ ನಿನಾದದೊಂದಿಗೆ ಪಲ್ಲಕಿಯು ಶ್ರೀ ದೇವಳಕ್ಕೆ ಆಗಮಿಸಿತು. ಶ್ರೀ ದೇವಳದ ಗೋಪುರದ ಬಳಿಕ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಪಲ್ಲಕಿಗೆ ಪುಷ್ಪಾರ್ಚನೆ ಮಾಡಿ ಪುಷ್ಪಮಾಲೆ ಸಮರ್ಪಿಸಿದರು. ಬಳಿಕ ಗೋಪುರದ ಬಳಿಯಿಂದ ಸೇವಾರ್ಥಿಗಳಾದ ನಾಗರಾಜ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಡಾ.ಚಿನ್ಮಯಿ ಕೊಚ್ಚಿ, ಶ್ರೀನಿಧಿ, ಯಧುನಂದನ ಗಲಗಲಿ, ಸುಮಂತ್, ರಾಘವ್, ಸುದನ್ವ ಗೋಪುರದ ಬಳಿಯಿಂದ ಶ್ರೀ ದೇವಳಕ್ಕೆ ಪಲ್ಲಕಿಯನ್ನು ಮೆರವಣಿಗೆಯಲ್ಲಿ ಹೊತ್ತೊಯ್ದರು. ನಂತರ ಶ್ರೀ ದೇವಳದ ಒಳಾಂಗಣದಲ್ಲಿ ನೂತನ ಪಲ್ಲಕಿ ಇರಿಸಲಾಯಿತು.ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸೇವಾರ್ಥಿಗಳಾದ ಉದ್ಯಮಿ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ, ಡಾ.ಚಿನ್ಮಯಿ ಕೊಚ್ಚಿ, ಶ್ರೀನಿಧಿ, ಯಧುನಂದನ ಗಲಗಲಿ,ಸುಮಂತ್, ರಾಘವ್, ಸುದನ್ವ, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಪ್ರಮುಖರಾದ ಹರೀಶ್.ಎಸ್ ಇಂಜಾಡಿ, ರಾಜೇಶ್ ಎನ್.ಎಸ್, ದಿಲೀಪ್ ಉಪ್ಪಳಿಕೆ, ಕೃಷ್ಣಮೂರ್ತಿ ಭಟ್, ದಿನೇಶ್ ಸಂಪ್ಯಾಡಿ, ಮೋಹನದಾಸ ರೈ, ವಿಮಲಾ ರಂಗಯ್ಯ, ವನಜಾ.ವಿ.ಭಟ್, ಗಿರಿಧರ ಸ್ಕಂದ,ಅಚ್ಚುತ್ತ ಗೌಡ, ಶೋಭಾ ಗಿರಿಧರ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಂಟ್ ರಾಜಲಕ್ಷ್ಮೀ ಶೆಟ್ಟಿಗಾರ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ದೇವಳದ ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ, ದೇವಳದ ಸಿಬ್ಬಂದಿಗಳು, ಭಕ್ತರು ಇದ್ದರು.
ಇಂದು ಸಮರ್ಪಣೆ:ಸುಮಾರು ೧೭ ಲಕ್ಷದ ೬೫ ಸಾವಿರದ ೨೦೦ ರೂ ವೆಚ್ಚದಲ್ಲಿ ಪಲ್ಲಕಿ ರಚನೆಯಾಗಿದೆ. ಕಾರ್ಕಳದ ಬಜಗೋಳಿಯ ಸುಧಾಕರ ಡೋಂಗ್ರೆ ಮತ್ತು ಶಿಷ್ಯರು ನೂತನ ಪಲ್ಲಕಿ ನಿರ್ಮಿಸಿದ್ದಾರೆ. ಸುಮಾರು ೧೮ ಕೆ.ಜಿ ಬೆಳ್ಳಿಯಲ್ಲಿ ಈಗಿರುವ ಶ್ರೀ ದೇವರ ಪಲ್ಲಕಿಯಂತೆ ೧೮ ಕೆಜಿ ಬೆಳ್ಳಿಯನ್ನು ನೂತನ ಪಲ್ಲಕಿಗೆ ವಿನಿಯೋಗಿಸಲಾಗಿದೆ. ಆಕರ್ಷಕ ಕೆತ್ತನೆಗಳೊಂದಿಗೆ ಪಲ್ಲಕಿ ರಚಿತವಾಗಿದೆ. ಸೋಮವಾರ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ನೂತನ ಬೆಳ್ಳಿಯ ಪಲ್ಲಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ.