ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಿಎಲ್ಒಗಳು ತಾವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಹೋಗಬೇಕಾದರೆ ಎರಡು ರಾಷ್ಟ್ರೀಯ ಪಕ್ಷಗಳ ಬಿಎಲ್ಎಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ನಿಮ್ಮ ಕೆಲಸವೂ ಸುಲಭವಾಗುತ್ತದೆ ಹಾಗೂ ನಿಖರ ಮಾಹಿತಿ ಸಂಗ್ರಹಿಸಬಹುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸೋಮವಾರ ಪಟ್ಟಣದ ಹಿರೇಕಲ್ಮಠ ಸಮುದಾಯ ಭವನದಲ್ಲಿ ನಡೆದ ಎಸ್ಐಆರ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ. ಆದರೆ ಮತದಾನ ಮತದಾರರ ಹಕ್ಕು. ಅದನ್ನು ನಾವು ಕಸಿಯಬಾರದು. ಯಾರದ್ದು ಎರಡ್ಮೂರು ಕಡೆ ಹೆಸರು ಇದೆಯೋ ಅಥವಾ ಮೃತಪಟ್ಟವರು ಇದ್ದಾರೋ ನೋಡಿ ಅಂತಹವರ ಹೆಸರನ್ನು ಮಾತ್ರ ಡಿಲಿಟ್ ಮಾಡಿಸಬೇಕು ಎಂದರು.
ಎರಡು ಅಥವಾ ಮೂರು ಹಂತದ ಚುನಾವಣೆಗಳು ನಡೆದರೆ ಬೆಂಗಳೂರಿನಲ್ಲಿ ಒಂದು ಹಂತದಲ್ಲಿ ಮತ ಹಾಕಿದ್ದರೆ, ಅದೇ ವ್ಯಕ್ತಿ ಇನ್ನೊಂದು ಹಂತದಲ್ಲಿ ತಮ್ಮ ಗ್ರಾಮದಲ್ಲಿ ನಡೆಯುವ ಚುನಾವಣೆಯಲ್ಲೂ ಮತ ಚಲಾಯಿಸುತ್ತಿರುವುದು ಸಾಮಾನ್ಯವಾಗಿದೆ. ಅಂತಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಿ ಎಂದು ಬಿಎಲ್ಒಗಳಿಗೆ ತಾಕೀತು ಮಾಡಿದರು.ಈಗಾಗಲೇ ಅವಳಿ ತಾಲೂಕಿನ 245 ಮತಗಟ್ಟೆಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿಯ ಬೂತ್ ಏಜೆಂಟ್ಗಳು ನೇಮಕ ಮಾಡಿದ್ದಾರೆ ಅಂತಹವರನ್ನು ಗ್ರಾಮದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಪ್ರತಿ ಮನೆಯಲ್ಲೂ ಇದ್ದಾರೆ ಅಥವಾ ಇಲ್ಲವೋ ಎಂದು ಕ್ರಾಸ್ ಚೆಕ್ ಮಾಡಿ ನಂತರ ಡಿಲಿಟ್ ಮಾಡಿ ಆದರೆ ಸುಖಾಸುಮ್ಮನೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಡಬೇಡಿ. ಒಟ್ಟಾರೆ ಮತ ಪರಿಷ್ಕರಣೆ ಬಗ್ಗೆ ದೂರು ಮಾತ್ರ ಬರಬಾರದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಕವಿರಾಜ್ ಮಾತನಾಡಿ, ಚುನಾವಣಾ ಆಯೋಗ ಏನು ಸೂಚನೆಗಳನ್ನು ನೀಡಿದೆಯೋ ಅದನ್ನು ಮಾತ್ರ ನಾವು ನಿಮಗೆ ತಿಳಿಸುತ್ತೇವೆ. ಅದರಂತೆ ನೀವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡಬೇಕೇ ಹೊರತು, ವೈಯಕ್ತಿಕವಾಗಿ ಯಾವುದೇ ನಿಲುವುಗಳನ್ನು ನೀವೇ ತೆಗೆದುಕೊಳ್ಳಬೇಡಿ. ಅನುಮಾನ ಇದ್ದರೆ ಮೇಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಬಿಜೆಪಿ ಮುಖಂಡ ನೆಲಹೊನ್ನೆ ಮಂಜುನಾಥ್ ಮಾತನಾಡಿದರು. ಉಪ ತಹಸೀಲ್ದಾರ್ ಚಂದ್ರಪ್ಪ, ಮಂಜುನಾಥ್ ಹಾಗೂ ಬಿಎಲ್ಒ ಹಾಗೂ ಬಿಎಲ್ಎಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.