ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಯೋಜನೆ ತಲುಪಿಸಿ

| Published : Oct 06 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಪಟ್ಟಣದಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಬೇಕು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಬೇಕು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ಪುರಸಭಾ ಸಭಾಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಜನರಿಗೆ ಕುಡಿಯುವ ನೀರು, ಸ್ವಚ್ಛತೆಗೆ ಗಮನಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಖ್ಯ ರಸ್ತೆಗಳಲ್ಲಿ ಫುಟ್‌ಪಾತ್‌ಗಳನ್ನು ಕೆಲವರು ಅತಿಕ್ರಮಿಸಿದ್ದು, ತುಂಬ ತೊಂದರೆ ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕೆಲವು ಬಡಾವಣೆಗಳಲ್ಲಿ ಮನೆಯ ಮುಂದೆ ಬೃಹತ್ ಕಟ್ಟೆಗಳನ್ನು ಕಟ್ಟಿದ್ದು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಅಂತವುಗಳನ್ನು ಸಂಪೂರ್ಣ ತೆರವುಗೊಳಿಸಲು ಸೂಚನೆ ನೀಡಿದ್ದಾಗಿ ತಿಳಿಸಿದರು.

ಕಂದಾಯ ವಸೂಲಿಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ನೀರಿನ ಕರ ಮತ್ತು ವಾಣಿಜ್ಯ ಕರ ವಸೂಲಿಗೆ ಅಧಿಕಾರಿಗಳು ಮುಂದಾಗಿದ್ದು ಕಂಡುಬಂದಿದೆ ಎಂದರು.

ಪಟ್ಟಣದಲ್ಲಿ ಎಷ್ಟು ಗಾರ್ಡನ್‌ಗಳಿವೆ ಎಂಬುದರ ಬಗ್ಗೆ ಪಟ್ಟಿ ಮಾಡಿ ಮಾಹಿತಿ ನೀಡಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿರುವೆ. ಅತಿಕ್ರಮಣವಾಗಿದ್ದರೆ ತೆರವುಗೊಳಿಸಲು ಹೇಳಿರುವೆ. ಕೆಲವು ಉದ್ಯಾನಗಳ ಜಾಗಗಳನ್ನು ಕೈಬರಹದ ಉತಾರೆ ಮೇಲೆ ತಮ್ಮ ಹೆಸರಿಗೆ ಮಾಡಿ ಕೊಂಡಿದ್ದಾರೆಂಬ ಮಾಹಿತಿ ಇದೆ. ಮರಳಿ ಪುರಸಭೆಯ ವಶಕ್ಕೆ ಪಡೆಯಲು ಅವಕಾಶವಿದ್ದು, ಅವುಗಳು ಶೀಘ್ರವೇ ಪುರಸಭೆ ವಶಕ್ಕೆ ಸೇರಲಿವೆ ಎಂದು ಮಾಹಿತಿ ನೀಡಿದರು.

ಈ ಸಮಯದಲ್ಲಿ ಯೋಜನಾ ನಿರ್ದೇಶಕ ಪಿ.ಎ.ಸೌದಾಗರ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಮುಸ್ತಫಾ ಚೌದ್ರಿ, ಡಿ.ವ್ಹಿ.ಪಾಟೀಲ, ಮುದಕಣ್ಣ ಬಡಿಗೇರ, ನಿಂಗರಾಜ ಕುಂಟೋಜಿ, ಯಾಸೀನ ಮಮದಾಪೂರ, ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ, ಆರೋಗ್ಯ ಅಧಿಕಾರಿ ಶಿವಾನಂದ ಜುಮನಾಳ, ಶ್ರೀಪಾದ ಜೋಶಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಎಇಇ ಸಂದೀಪ ವಠಾರ, ಡಿ.ಬಿ.ಜಾನ್ವೇಕರ, ಪಿಎಸ್‌ಐ ರಾಮನಗೌಡ ಸಂಕನಾಳ, ಪಿಡಬ್ಲುಡಿ ಅಧಿಕಾರಿಗಳು ಇದ್ದರು.-------ಬಾಕ್ಸ್‌

₹೩.೧೭ ಕೋಟಿ ಬಿಲ್ ಪಾಸ್

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿ ₹೩.17 ಕೋಟಿ ಸಂಪೂರ್ಣ ಬಿಲ್ ತೆಗೆಸಿಕೊಂಡಿದ್ದಾರೆ. ಕೆಲಸವನ್ನೇ ಮಾಡಿಲ್ಲ. ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದರ ಬಗ್ಗೆ ನನಗೆ ಮಾಹಿತಿ ನೀಡಲು ಹೇಳಿದ್ದೇನೆ. ವರದಿ ಬಳಿಕ ನಾನೇ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ, ಸೂಕ್ತ ತನಿಖೆಯಾಗಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

-------