ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ಬರುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.ಅವರು ಆಲಮೇಲ ತಾಲೂಕಿನ ಗಬಸಾವಳಗಿ ಗ್ರಾಪಂಗೆ ಗುರುವಾರ ಭೇಟಿ ನೀಡಿ ಸಭೆ ನಡೆಸಿ ಮಾತನಾಡಿದ ಅವರು, ಆಲಮೇಲ ತಾಲೂಕಿನ ಗಬಸಾವಳಗಿ ಗ್ರಾಮಸ್ಥರು ಇತ್ತೀಚಿಗೆ ಪಂಚಾಯಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಪಂ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ಸಹಕರಿಸಬೇಕು. ಗ್ರಾಮದ ಪ್ರಗತಿಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ನಂತರ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ತೆರಿಗೆ ವಸೂಲಾತಿ ಬಗ್ಗೆ ಚರ್ಚಿಸಿದರು. ಪ್ರಸಕ್ತ ವರ್ಷ ಶೇ.೪ರಷ್ಟು ಮಾತ್ರ ತೆರಿಗೆ ಸಂಗ್ರಹಣೆಯಾಗಿದೆ. ಒಂದು ವಾರದಲ್ಲಿ ಶೇ.೧೦ರಷ್ಟು ಗುರಿ ತಲುಪಬೇಕು ಎಂದು ಪಿಡಿಒ ಜ್ಯೋತಿ ಶೇಗಾವಿ ಅವರಿಗೆ ಸೂಚಿಸಿದರು.ಸಂಗ್ರಹವಾದ ತೆರಿಗೆಯಲ್ಲಿ ಶೇ.೬ರಷ್ಟು ಹಣವನ್ನು ಗ್ರಂಥಾಲಯದಲ್ಲಿ ಪುಸ್ತಕಗಳು, ದಿನ ಪತ್ರಿಕೆಗಳನ್ನು ಖರೀದಿಸಲು ಉಪಯೋಗಿಸಬೇಕು ಎಂದು ಸೂಚಿಸಿದರು.
ಆಹೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಎಸ್ ಡಿಎಂಸಿ ರಚಿಸಿ ಕಚೇರಿಗೆ ವರದಿ ಸಲ್ಲಿಸುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮತ್ತು ಕೆಲವು ರೈತರು ತಮ್ಮ ಹೊಲದಿಂದ ಕುಡಿಯಲು ನೀರು ಕೊಡಲು ಸಿದ್ಧರಿದ್ದಾರೆ. ಅವರ ಬಾವಿಗೆ ವಿದ್ಯುತ್ ಪರಿವರ್ತಕ ಅಳವಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಅಜೂರ ಮಾತನಾಡಿ, ಮೂರು ದಿನಗಳೊಳಗೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಾಮಾನ್ಯ ಸಭೆ ಕರೆದು ೧೫ನೇ ಹಣಕಾಸು ಯೋಜನೆ ಮತ್ತು ನರೇಗಾ ಕ್ರಿಯಾಯೋಜನೆ ಕುರಿತು ಚರ್ಚಿಸಿ ಎಲ್ಲ ಸಮಸ್ಯೆ ಪರಿಹರಿಸಬೇಕು ಎಂದು ಪಿಡಿಒ ಮತ್ತು ಸದಸ್ಯರಿಗೆ ಸೂಚಿಸಿದರು.ಈ ವೇಳೆ ಇಒ ಫರೀದಾ ಪಠಾಣ, ರಾಮು ಜಿ. ಅಗ್ನಿ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿಗಳು, ಸದಸ್ಯರು, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸಿದ್ದರಾಮ ಅಂಕಲಗಿ, ಎ.ಎ.ದುರ್ಗದ, ಜಿ.ವೈ.ಮುರಾಳ, ಎನ್. ಎಂ.ಗಬಸವಳಗಿ, ತಾರನಾಥ್ ರಾಠೋಡ, ಆರೀಫ್ ಬಿರಾದಾರ, ಶಂಭುಲಿಂಗ ಹಿರೇಮಠ, ರಾಜಶೇಖರ್ ಜೊತಗೊಂಡ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜ್ಯೋತಿ ಶೇಗಾವಿ, ನರೇಗಾ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ತಾಲೂಕು ಐ ಇ ಸಿ ಸಂಯೋಜಕರು, ಗ್ರಾಪಂ ಸಿಬ್ಬಂದಿ ಇದ್ದರು.