ಯುವ ಪೀಳಿಗೆಗೆ ವಚನ ಸಾಹಿತ್ಯ ತಲುಪಿಸಿ: ಚನ್ನಪ್ಪ ಸಲಹೆ

| Published : Nov 24 2025, 01:15 AM IST

ಯುವ ಪೀಳಿಗೆಗೆ ವಚನ ಸಾಹಿತ್ಯ ತಲುಪಿಸಿ: ಚನ್ನಪ್ಪ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ತಾನೊಬ್ಬನೇ ಬೆಳೆಯುವುದಲ್ಲ, ನಮ್ಮೊಟ್ಟಿಗೆ ಇತರರನ್ನು ಉದ್ಧಾರ ಮಾಡಬೇಕಿರುವ ಕೆಲಸವಾಗಬೇಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಚನ್ನಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕೋಲಾರ

ಸಮಾಜದಲ್ಲಿ ತಾನೊಬ್ಬನೇ ಬೆಳೆಯುವುದಲ್ಲ, ನಮ್ಮೊಟ್ಟಿಗೆ ಇತರರನ್ನು ಉದ್ಧಾರ ಮಾಡಬೇಕಿರುವ ಕೆಲಸವಾಗಬೇಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಚನ್ನಪ್ಪ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಅಖಿತ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ರ ನೇತೃತ್ವದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವಚನಗಳನ್ನು ಅರ್ಥೈಸಿಕೊಂಡಾಗ ಮಾತ್ರ ಸಮಾಜದ ಏಳಿಗೆಯಾಗಲು ಸಾಧ್ಯ, ಆ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೆಲಸ ಮಾಡಿಕೊಂಡು ಬರುತ್ತಿದೆ. ಮುಂದೆಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮ ಮಾಡಿ ಯುವಪೀಳಿಗೆಗೆ ವಚನಗಳನ್ನು ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ನಾವು ಮಾಡಿರುವ ಆಸ್ತಿ- ಅಂತಸ್ಥನ್ನು ನಮ್ಮೊಟ್ಟಿಗೆ ಕೊಂಡೊಯ್ಯಲು ಸಾಧ್ಯವಿಲ್ಲ, ಅದೇ ರೀತಿ ದಾನ, ಧರ್ಮಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ, ಆದರೆ ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿದುಕೊಳ್ಳುತ್ತವೆ, ಶರಣ ಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶಗಳನ್ನು ಕಾರ್ಯರೂಪಕ್ಕೆ ತಂದು ಜಾತಿ, ಧರ್ಮ ಬೇಧ ಬಿಟ್ಟು ಪರಿಷತ್ತಿನ ಮೂಲಧ್ಯೇಯಗಳನ್ನು ಸಮಾಜಕ್ಕೆ ತಲುಪಿಸಿ ಎಂದು ಸಲಹೆ ನೀಡಿದರು.

ಜಿಲ್ಲಾಧ್ಯಕ್ಷ ಬಿ.ಸುರೇಶ್ ಮಾತನಾಡಿ, ೧೨ನೇ ಶತಮಾನದಲ್ಲಿ ಶಿವ ಶರಣರು ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಜ್ಞಾನ ಸಂಪತ್ತು ಸಿಗುವಂತೆ ಮಾಡಬೇಕು, ಈಗಿನ ಕಾಲಘಟ್ಟದಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗಿದೆ. ಆರೋಗ್ಯಕರ ಬೆಳವಣಿಗೆಗೆ ಹೆಚ್ಚಾಗಿ ಶಾಲೆಗೊಂದು ಕಾರ್ಯಕ್ರಮ ಮಾಡುವ ಆಲೋಚನೆ ಇದೆ ಹಾಗಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ರಾಜ್ಯದಿಂದ ಕೋಲಾರದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಸಹಕಾರ ಅಗತ್ಯವಾಗಿ ಬೇಕಿದೆ. ಅಲ್ಲದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಸಮಿತಿ ರಚನೆ ಮಾಡಿ ಒಗ್ಗಟ್ಟಾಗಿ ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಮನೆ ಮನೆಗೆ ವಚನ ಸಾಹಿತ್ಯಗಳನ್ನು ತಲುಪಿಸುವ ಕೆಲಸ ಮಾಡುವ ಆಲೋಚನೆ ಇದೆ, ಅದಕ್ಕಾಗಿ ತಾವೆಲ್ಲಾ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪತ್ರಕರ್ತ ಕೆ.ಎಸ್.ಗಣೇಶ್, ಕಸಾಪ ಮಾಜಿ ಅಧ್ಯಕ್ಷ ಜೆ.ಜೆ.ನಾಗರಾಜ್, ಕದಲಿ ಮಹಿಳಾ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಾಯಾ ಬಾಲಚಂದ್ರ, ಬಂಗಾರಪೇಟೆ ಉಮೇಶ್, ಮಂಜುನಾಥ್, ರೈತ ಸಂಘದ ಹೋರಾಟಗಾರ ವೀರಭದ್ರಸ್ವಾಮಿ, ಮುಳಬಾಗಿಲು ಶಿವಕುಮಾರ್, ಕೆಜಿಎಫ್ ಶೇಖರಪ್ಪ, ಕಳ್ಳೀಪುರ ನಟರಾಜ್, ಪತ್ರಕರ್ತರಾದ ಸಚ್ಚಿದಾನಂದ, ಕೆ.ಬಿ.ಜಗದೀಶ್, ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಆರ್.ಸಿ.ಮಂಜುನಾಥ್, ದೇವರಾಜ್, ಮಂಜುನಾಥ್, ಸತೀಶ್ ಮಹಾಶೆಟ್ಟಿ, ಕೆ.ಸಿ.ಉಮೇಶ್, ಕುಮಾರ್, ಮಂಜುನಾಥ್, ವಿಜಯ್, ನರಸಾಪುರ ಲೋಕೇಶ್, ಚಂದ್ರಶೇಖರ, ಪ್ರಸನ್ನ, ಬಸವರಾಜ್, ಚಿಕ್ಕದೇವರಾಜ್, ವಿನಯ್, ಆನಂದ್, ಮಂಜು ಇದ್ದರು.