ಶೃಂಗೇರಿ ರೈತಸಂಘಟನೆಗಳಿಂದ ತಹಸೀಲ್ದಾರ್‌ಗೆ ಮನವಿ

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನಲ್ಲಿ ಪರವಾನಿಗೆ ಪಡೆದ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ರಸಗೊಬ್ಬರ ಹಾಗೂ ಮೈಲುತುತ್ತ ಕಳಪೆ ಮಟ್ಟದ್ದಾಗಿರುವ ಬಗ್ಗೆ ರೈತರಲ್ಲಿ ಅನುಮಾನ ಉಂಟಾಗಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ತಾಲೂಕು ರೈತಪರ ಸಂಘಟನೆಗಳು ಆಗ್ರಹಿಸಿದೆ.

ತಾಲೂಕು ಕಚೇರಿಯಲ್ಲಿ ತಾಲೂಕು ರೈತ ಸಂಘ, ಹಸಿರುಸೇನೆ , ರೈತಸಂಘಟನೆಗಳು ತಹಸೀಲ್ದಾರ್ ಮನವಿ ಸಲ್ಲಿಸಿದವು. ಅಡಕೆ, ಕಾಫಿ ತೋಟಗಳಲ್ಲಿ ವ್ಯಾಪಕ ಕೊಳೆರೋಗ ತಗುಲಿಗಿದ್ದು ಕಳೆದ ಮೂರ್ನಾಲ್ಕು ವರ್ಷಗಳಿಂದ ಅಡಕೆ, ಕಾಳು ಮೆಣಸಿಗೆ ಔಷಧಿ ಸಿಂಪಡಣೆ ಮಾಡುತ್ತಿದ್ದರೂ ಕೊಳೆರೋಗ ಹೆಚ್ಟುತ್ತಿದೆ. ಗೊಬ್ಬರ ಹಾಗೂ ಮೈಲುತುತ್ತದ ಗುಣಮಟ್ಟದ ಬಗ್ಗೆ ರೈತರಲ್ಲಿ ಅನುಮಾನ ಮೂಡುತ್ತಿದೆ. ಕೂಡಲೆ ಪರೀಕ್ಷೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ವರದಿ ಬಂದ ನಂತರ ರಸಗೊಬ್ಬರ, ಮೈಲುತುತ್ತ ವಿತರಣೆ ಮಾಡಬೇಕು ಎಂದರು.

ಪರವಾನಿಗೆ ಇಲ್ಲದೇ ರಸಗೊಬ್ಬರ, ಮೈಲುತುತ್ತ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೇನು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೂಡಲೆ ನೇಮಕ ಮಾಡಬೇಕು. ತಾಲೂಕಿನಲ್ಲಿ ಉಂಟಾಗಿರುವ ಯೂರಿಯ ಹಾಗೂ ಪೊಟಾಷ್ ರಸಗೊಬ್ಬರ ದಾಸ್ತಾನು ಮಾಡಬೇಕು. ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಪ್ರತಿ ದಿನ ನಡೆಯಬೇಕು. ಸೊಪ್ಪಿನ ಬೆಟ್ಟ ನೆಪವೊಡ್ಡದೇ ರೈತರ ಪಹಣಿಗಳಿಗೆ ಪೋಡಿ ಮಾಡಿಕೊಡಬೇಕು. ಎಸ್ ಐ ಟಿ ಸರ್ವೆ ಅರಣ್ಯ ಹಕ್ಕು ಸಮಿತಿ ಸರ್ವೆ, ಡೀಮ್ಡ್ ಅರಣ್ಯ ಸರ್ವೆ ಬಗ್ಗೆ ಗ್ರಾಮಸಭೆ ರೈತರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.


ತಹಸೀಲ್ದಾರ್ ಅನೂಪ್ ಸಂಜೋಗ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೈತಸಂಘದ ಚಂದ್ರಶೇಖರ್, ಪೂರ್ಣೇಶ್, ಚೆನ್ನಕೇಶವ, ಗುಂಡಪ್ಪ ಮತ್ತಿತರರು ಇದ್ದರು.

26 ಶ್ರೀ ಚಿತ್ರ 1-

ಶೃಂಗೇರಿ ತಾಲೂಕು ಕಚೇರಿಯಲ್ಲಿ ರೈತಪರ ಸಂಘಟನೆಗಳು ತಹಸೀಲ್ದಾರ್ ಅನೂಪ್ ಸಂಜೋಗ್ ಅವರಿಗೆ ಮನವಿ ಸಲ್ಲಿಸಲಾಯಿತು.