ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರು
ಧರ್ಮಸ್ಥಳದಲ್ಲಿ ಸೌಜನ್ಯ ಸೇರಿ 10-16 ವರ್ಷಗಳಿಂದ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಯವರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನೆಡೆಸಿದರು.ಪಟ್ಟಣದ ಸಮಾನ ಮನಸ್ಕ ಪತ್ರಕರ್ತರು, ರೈತ ಸಂಘ, ದಲಿತ ಸಂಘ, ಆಟೋ ಚಾಲಕ ಸಂಘ ಸೇರಿ ಮತ್ತಿತರ ಸಂಘಟನೆಯವರು ಸೌಜನ್ಯ ಭಾವಚಿತ್ರ ಹಿಡಿದುಕೊಂಡು ಇಲ್ಲಿನ ಬಸ್ ನಿಲ್ದಾಣ ವೃತ್ತದಿಂದ ತಹಶೀಲ್ದಾರ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು. ಅತ್ಯಾಚಾರ ಕೊಲೆ ಮಾಡಿರುವವರನ್ನು ಧರ್ಮದ ಹೆಸರಿನಲ್ಲಿ ಶಿಕ್ಷೆಯಿಂದ ತಪ್ಪಿಸುವ ಪ್ರಯತ್ನ ಸಾಗಿದೆ. ಇದಕ್ಕೆ ದಿಕ್ಕಾರ ಎಂಬ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಡಿಎಸ್ಎಸ್ ಮುಖಂಡ ಬದ್ದಿ ದುರುಗೇಶ್, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ತಪ್ಪಿತಸ್ಥರನ್ನು ರಕ್ಷಿಸುವ ಕಾರ್ಯ ಮಾಡಬಾರದು ಎಂದರು.ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್. ಭರಮಣ್ಣ, ಗುಡಿಯಾರ ಮಲ್ಲಿಕಾರ್ಜುನ, ಜಯಪ್ರಕಾಶ್ ನಾಯ್ಕ್, ಜಂಬೂರು ಮರಳುಸಿದ್ದಪ್ಪ ಮಾತನಾಡಿ, ಪ್ರಕರಣದ ಸಂಬಂಧ ಸರ್ಕಾರ ಎಸ್ಐಟಿ ರಚನೆ ಮಾಡಿರುವುದು ಸ್ವಾಗತ. ಸರ್ಕಾರ ತನಿಖೆಗೆ ಮುಕ್ತ ಅವಕಾಶ ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಉಜ್ಜನಿ ರುದ್ರಪ್ಪ ಮಾತನಾಡಿ, ಸೌಜನ್ಯ ಮತ್ತಿತರರ ಅತ್ಯಾಚಾರ ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವವರನ್ನು ಕೂಡಲೇ ಬಂಧಿಸಬೇಕು. ಹೋರಾಟದ ಮುಂದಿನ ಭಾಗವಾಗಿ ಕೊಟ್ಟೂರಿನಿಂದ ಜಿಲ್ಲಾ ಕೇಂದ್ರದ ಹೊಸಪೇಟಿಗೆ ಪಾದಯಾತ್ರೆ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗುವುದಾಗಿ ಹೇಳಿದರು.ಮುಖಂಡರಾದ ಬದ್ದಿ ಮಂಜುನಾಥ, ಹ್ಯಾಳ್ಯಾ ಕೊಟ್ರೇಶ್ ಎಲ್. ಕುಬೇರಪ್ಪ, ವಿಷ್ಣು, ರವಿಚಂದ್ರ, ಶಿವರಾಜ, ನಾಗರಾಜ, ಮಣಿಕಂಠ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಈ ಸಂಬಂಧ ಮನವಿಯನ್ನು ತಹಶೀಲ್ದಾರ ಅಮರೇಶ್ ಜಿ.ಕೆ. ಅವರಿಗೆ ಸಲ್ಲಿಸಿದರು.