ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಇತ್ತೀಚೆಗೆ ಸಮಾಜದಲ್ಲಿ ಕೇವಲ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವಹೇಳನ ಮಾಡುತ್ತಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ತಾಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.ಸಿಇಟಿ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದನ್ನು ಖಂಡಿಸಿ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಕುಮಾರ್, ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮೆಟ್ಟಲಾಗಿರುವ ಸಿಇಟಿ ಪರೀಕ್ಷಾ ವೇಳೆ ಇತಿಹಾಸದಲ್ಲಿ ಎಂದೂ ನಡೆಯದಂತಹ ಅಮಾನವೀಯ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿನುವಂತಾಗಿದೆ. ಜನಿವಾರ ತೊಡುವುದರಿಂದ ಪರೀಕ್ಷೆಗೆ ಏನಾದರೂ ತೊಂದರೆ ಆಗುತ್ತಿತ್ತಾ? ಮುಸ್ಲಿಂ ಸಮುದಾಯಕ್ಕೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡುವ ಅಧಿಕಾರಿಗಳು ನಮ್ಮ ಸಮುದಾಯದ ಯುವಕನಿಗೆ ಜನಿವಾರ ತೆಗೆಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಕಿಡಿಕಾರಿದರು.
ಜನಿವಾರ ಧರಿಸುವುದು ಸಮುದಾಯದ ಸಂಪ್ರದಾಯ ಹಾಗೂ ಧಾರ್ಮಿಕ ವಿಧಾನದ ಭಾಗವಾಗಿದ್ದು ಸಂವಿಧಾನದಲ್ಲಿ ನಮ್ಮ ಧಾರ್ಮಿಕ ಆಚರಣೆಗೂ ಅವಕಾಶ ನೀಡಲಾಗಿದೆ. ಜನಿವಾರವನ್ನು ಕೇವಲ ಬ್ರಾಹ್ಮಣರು ಮಾತ್ರ ಧರಿಸುವುದಿಲ್ಲ. ಆರ್ಯರು, ವೈಶ್ಯರು ಧರಿಸುತ್ತಾರೆ, ಪರೀಕ್ಷೆ ನೆಪದಲ್ಲಿ ಜನಿವಾರ ತೆಗೆಸಿರುವುದು ಈ ಮೂರು ಸಮುದಾಯದ ಜನರಿಗೆ ಮತ್ತು ನಮ್ಮ ನಂಬಿಕೆಗೆ ಮಾಡಿದ ಅಪಮಾನವಾಗಿದೆ. ಇದಕ್ಕೆ ರಾಜ್ಯ ವ್ಯಾಪ್ತಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಖಂಡನೆ ವ್ಯಕ್ತವಾಗಿದ್ದು ನಮ್ಮ ತಾಲೂಕು ಸಂಘ ಸಹ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.ಬ್ರಾಹ್ಮಣ ಸಂಘದ ಪದಾಧಿಕಾರಿಗಳಾದ ಶಿವಶಂಕರ್, ಅಂಬಾಪ್ರಸಾದ್, ಉದಯಶಂಕರ್, ರವೀಂದ್ರಬಾಬು ಸೇರಿದಂತೆ ಮಾತನಾಡಿ, ಬ್ರಾಹ್ಮಣರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದ್ದು, ಸಮಾಜದಲ್ಲಿ ನಮ್ಮನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸುವ ಕೆಲಸ ಮಾಡುವ ಮೂಲಕ ನಮ್ಮ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜನಿವಾರ ತೆಗಿಸುವಂತೆ ಆದೇಶಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.