ಸಾರಾಂಶ
ಎರಡು ಬಾರಿ ಅಡಕೆ ಸಸಿಗಳನ್ನು ಕಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಅವರನ್ನು ಕಾನೂನಿ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಎರಡು ಬಾರಿ ಅಡಕೆ ಸಸಿಗಳನ್ನು ಕಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಅವರನ್ನು ಕಾನೂನಿ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.ಪಟ್ಟಣದ ತಾಲೂಕು ಕಚೇರಿ ಮುಂದೆ ನೂರಾರು ರೈತ ಸಂಘದ ಕಾರ್ಯಕರ್ತರು, ಅಡಕೆ ಸಸಿಗಳನ್ನು ಹಿಡಿದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ಎರಡು ಬಾರಿ 750 ಕ್ಕೂ ಅಧಿಕ ಸಸಿಗಳನ್ನು ಕಡಿದ ಆರೋಪಿಯನ್ನು ಬಂಧಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮತ್ತೊಬ್ಬರ ಬೆಳೆ ನಾಶ ಮಾಡುತ್ತಾರೆ. ರೈತನ ಬಲಿ ಪಡೆಯಲು ತಯಾರಿರುತ್ತಾರೆ ಎಂದರು.ರೈತ ವಿರೋಧಿ ನಡವಳಿಕೆಗಳು ಇತ್ತೀಚಿಗೆ ಹೆಚ್ಚುತ್ತಿದೆ. ರೈತರ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ನಿಗಾವಹಿಸುತ್ತಿಲ್ಲ. ಸರ್ಕಾರ ಕೂಡ ರೈತ ವಿರೋಧಿ ನೀತಿಗಳನ್ನೇ ಅನುಷ್ಠಾನ ಮಾಡುತ್ತಿವೆ. ಎಲ್ಲವನ್ನೂ ಹೋರಾಟ ಮಾಡಿಯೇ ಕೇಳುವ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ರೈತ ಪರ ಕೆಲಸವನ್ನು ಕೈಗೊಳ್ಳಬೇಕು. ರೈತರನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ, ಅಡಕೆ ಗಿಡಗಳು ರೈತನ ದೈವ ಸ್ವರೂಪವಾಗಿದೆ. ಕಷ್ಟಪಟ್ಟು ಬೆಳೆದ ಅಡಕೆ ಸಸಿಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದ ಮನುಷ್ಯನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಚೆನ್ನಾಗಿ ಬೆಳೆದ ಸಸಿಗಳು ಕಟುಕರಿಗೆ ಕಣ್ಣು ಕುಕ್ಕಿತ್ತು ಎನಿಸಿದೆ. ಏಕಾಏಕಿ ರಾತ್ರಿ ಸಸಿ ಮಣ್ಣು ಪಾಲು ಮಾಡಿದ್ದು ರೈತ ದ್ವೇಷಿ ಅನಿಸುತ್ತಿದೆ. ದ್ವೇಷ ಅಸೂಯೆಗೆ ಈ ರೀತಿ ಬೆಳೆ ನಾಶ ಸರಿಯಲ್ಲ. ಕೂಡಲೇ ಪ್ರಕರಣದ ಆರೋಪಿ ಬಂಧಿಸಬೇಕು ಎಂದು ಆಗ್ರಹಿಸಿದರು.ರೈತಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಒಂದೂವರೆ ವರ್ಷದಲ್ಲಿ 6 ಪ್ರಕರಣ ನಮ್ಮಲ್ಲಿ ನಡೆದಿದೆ. ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ತಾಲೂಕು ಆಡಳಿತ ಎಚ್ಚೆತ್ತು ರೈತರ ಬೆಳೆ ಕಾಪಾಡಬೇಕು. ಬೆಳೆ ನಾಶದಿಂದ ಮನನೊಂದ ರೈತ ಮತ್ತೊಂದು ಆತ್ಮಹತ್ಯೆ ದಾರಿ ಆಯ್ಕೆ ಮಾಡುತ್ತಾನೆ. ಮತ್ತೊಂದು ಪ್ರಕರಣ ನಡೆದರೆ ತಾಲೂಕು ಆಡಳಿತವೇ ನೇರ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ರೈತರ ಬಗ್ಗೆ ಯಾವ ಇಲಾಖೆಯು ಕುಂದು ಕೊರತೆಗಳ ಸಭೆ ನಡೆಸುತ್ತಿಲ್ಲ. ಕೂಡಲೇ ರೈತ ಪರ ನಿಲ್ಲದಿದ್ದರೆ ಆಯಾ ಕಚೇರಿ ಮುಂದೆ ಧರಣಿ ನಡೆಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರೈತಸಂಘದ. ಶಿವಕುಮಾರ್,ಬಸವರಾಜು, ಸತ್ತಿಗಪ್ಪ, ಯತೀಶ್, ದಲಿತ ಮುಖಂಡ ಬಸವರಾಜು, ಸಂತ್ರಸ್ತ ಮಹೇಶ್ ಹಾಗೂ ನೂರಾರು ರೈತರು ಇತರರು ಇದ್ದರು.