ಚಿಕ್ಕಮಗಳೂರುಶ್ರೀಗುರು ದತ್ತಾತ್ರೇಯ ಪೀಠ ಮತ್ತು ನಾಗೇನಹಳ್ಳಿಯ ಬಾಬಾಬುಡನ್ ದರ್ಗಾದ ಬಗ್ಗೆ ಸರ್ಕಾರಿ ದಾಖಲೆಗಳ ಪ್ರಕಾರವೇ ವೈಜ್ಞಾನಿಕವಾಗಿ ಉತ್ಖನನ ಮತ್ತು ತನಿಖೆಯಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ವಿಶ್ವಹಿಂದೂ ಪರಿಷತ್, ಬಜರಂಗದಳ ರಾಜ್ಯ ಸರ್ಕಾರಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶ್ರೀಗುರು ದತ್ತಾತ್ರೇಯ ಪೀಠ ಮತ್ತು ನಾಗೇನಹಳ್ಳಿಯ ಬಾಬಾಬುಡನ್ ದರ್ಗಾದ ಬಗ್ಗೆ ಸರ್ಕಾರಿ ದಾಖಲೆಗಳ ಪ್ರಕಾರವೇ ವೈಜ್ಞಾನಿಕವಾಗಿ ಉತ್ಖನನ ಮತ್ತು ತನಿಖೆಯಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್, ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ತಂತ್ರಜ್ಞರು, ಇತಿಹಾಸ ತಜ್ಞರು ಹಾಗೂ ಪುರಾತತ್ವ ಇಲಾಖೆಯಿಂದ ವೈಜ್ಞಾನಿಕವಾಗಿ ತನಿಖೆಯಾಗಿ ಸರಿಯಾದ ಮಾಹಿತಿ ಬರಂಗವಾಗಬೇಕು ಎಂದು ಬಾಬಾಬುಡನ್ ದರ್ಗಾ ಹೆರಿಟೇಜ್ ಕೌನ್ಸಿಲ್ ಎನ್ನುವ ಸಂಘಟನೆ ಒತ್ತಾಯಿಸಿರುವುದನ್ನು ಸ್ವಾಗತಿಸುತ್ತೇವೆ. ಇದರ ಜೊತೆ ನಾಗೇನಹಳ್ಳಿಯ ಬಾಬಾಬುಡನ್ ದರ್ಗಾದ ಬಗ್ಗೆಯೂ ವೈಜ್ಞಾನಿಕ ತನಿಖೆ ಆಗಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.ದತ್ತಾತ್ರೇಯ ಗುಹೆಯ ಒಳಭಾಗದಲ್ಲಿ 4 ಗೋರಿಗಳಿವೆ ಎಂದು ಕೆಲವರು ಹೇಳುತ್ತಾರೆ. ಈ ಗೋರಿಗಳ ಬಗ್ಗೆ ವೈಜ್ಞಾನಿಕ ಉತ್ಖನನ ನಡೆದು ತನಿಖೆ ನಡೆಸಿ ನಿಜಾಂಶ ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದರು.
ಎಲ್ಲೆಲ್ಲಿ ದತ್ತಾತ್ರೇಯರ ಕುರುಹುಗಳಿದೆಯೋ ಅಲ್ಲೆಲ್ಲಾ ಔಂದುಬರ ವೃಕ್ಷಗಳಿರುತ್ತವೆ. ದತ್ತಾತ್ರೇಯರ ಅರ್ಚಕರೇ ಆ ವೃಕ್ಷ ವನ್ನೂ ಪೂಜಿಸಬೇಕು. ದತ್ತ ಪೀಠಕ್ಕೆ ಭೇಟಿ ನೀಡುವ ಭಕ್ತರು ಪಾದುಕೆಗಳ ದರ್ಶನದ ನಂತರ ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಬೇಕು ಎನ್ನುವುದು ಪದ್ಧತಿ. ಆದರೆ ಈಗ ಗುಹೆ ಎದುರಿನ ಔದುಂಬರ ವೃಕ್ಷಕ್ಕೆ ತಂತಿ ಬೇಲಿ ಹಾಕಲಾಗಿದೆ. ದತ್ತಪೀಠ ಮತ್ತು ಔದುಂಬರ ವೃಕ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಔದುಂಬರ ವೃಕ್ಷದ ಬೇಲಿ ತಕ್ಷಣ ತೆರವು ಮಾಡಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್ ಹಾಗೂ ಜಿಲ್ಲಾ ಸಹಕಾರ್ಯದರ್ಶಿ ಅಮಿತ್, ಆಟೋ ಶಿವಣ್ಣ, ಪ್ರದೀಪ್, ದಿಲೀಪ್ ಶೆಟ್ಟಿ, ನಯನ್ ಗೌಡ ಇದ್ದರು.-- ಬಾಕ್ಸ್---
ಮತ್ತೆರಡು ಗೋರಿ ನಿರ್ಮಾಣ?ಮಾಣಿಕ್ಯಾಧಾರ ಬಳಿ ಹೊಸದಾಗಿ ಗೋರಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಮುತ್ತಿನ ಕರೆ ಬಳಿ ಒಂದು ಗೋರಿ ರೀತಿ ನಿರ್ಮಾಣವೊಂದು ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಟಿ.ರಂಗನಾಥ್ ಒತ್ತಾಯಿಸಿದರು.