ಪರಿಶಿಷ್ಟರಿಗೆ ಒಳ ಮೀಸಲು ಜಾರಿಗೆ ಆಗ್ರಹ

| Published : Jan 31 2025, 12:50 AM IST

ಸಾರಾಂಶ

ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಸತ್ಯಾಗ್ರಹ ನಡೆಸಲಾಯಿತು.

ದಲಿತ ಸಂಘರ್ಷ ಸಮಿತಿಯಿಂದ ಒನಕೆ ಓಬವ್ವ ವೃತ್ತದ ಬಳಿ ಸತ್ಯಾಗ್ರಹಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಹಾಗೂ ಕಾಂತರಾಜ್ ವರದಿಯನ್ನು ಶೀಘ್ರ ಜಾರಿಗೆ ತರುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಕಾರ್ಯಕರ್ತರು ಗುರುವಾರ ಸತ್ಯಾಗ್ರಹ ನಡೆಸಿದರು.

ನಗರದಲ್ಲಿನ ಮುಖ್ಯ ರಸ್ತೆಗಳ ಅಗಲೀಕರಣ, ವಸತಿ ರಹಿತರಿಗೆ ನಿವೇಶನ, ಮನೆಗಳನ್ನು ಕಲ್ಪಿಸುವುದು. ಸರ್ಕಾರದ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡುವಂತೆ ಧರಣಿ ನಿರತರು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್ ಮಾತನಾಡಿ, ಸದಾಶಿವ ಆಯೋಗ ಹಾಗೂ ಕಾಂತರಾಜ್ ಆಯೋಗದ ವರದಿ ಸಲ್ಲಿಕೆಯಾಗಿ 15 ವರ್ಷಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಹಿಂದೇಟು ಹಾಕುತ್ತಿದೆ. ಜಾತಿ ಜನಗಣತಿ ನಡೆಸುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿದ್ದು, ಅಸ್ಪೃಶ್ಯರು , ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಲೆ ಬರುತ್ತಿದೆ ಎಂದು ದೂರಿದರು.

ಚಿತ್ರದುರ್ಗದಲ್ಲಿ ರಸ್ತೆಗಳು ಕಿಷ್ಕಿಂದೆಯಾಗಿರುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಚಳ್ಳಕೆರೆ ಟೋಲ್‍ಗೇಟ್‍ನಿಂದ ಹಿಡಿದು ಗಾಂಧಿವೃತ್ತದ ಮೂಲಕ ಹೊಳಲ್ಕೆರೆ, ದಾವಣಗೆರೆ ಹಾಗೂ ಮೆದೇಹಳ್ಳಿ ರಸ್ತೆಗಳನ್ನು ಅಗಲೀಕರಣಗೊಳಿಸಬೇಕು. ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಪರಿಶಿಷ್ಟ ಜಾತಿ, ವರ್ಗದವರು ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಅಂತಹ ಸಾಗುವಳಿದಾರರನ್ನು ಸಕ್ರಮಗೊಳಿಸಿ ಸಾಗುವಳಿ ಪತ್ರ ನೀಡಬೇಕು ಒತ್ತಾಯಿಸಿದರು.

ಈ ವೇಳೆ ಇನಾಯತ್, ದಾದಾಪೀರ್, ಬಸವರಾಜ್, ಹೊನ್ನೂರಪ್ಪ, ಶಿವಣ್ಣ, ಕೃಷ್ಣಪ್ಪ, ರಂಗಸ್ವಾಮಿ, ರಜಿಯಾಬೇಗಂ, ಪ್ಯಾರಿಮ, ವಿಜಯಲಕ್ಷ್ಮಿ, ಕೈರುನ್, ಪರ್ವಿನ್, ರಾಮಣ್ಣ ತಿಪ್ಪಮ್ಮ, ವೆಂಕಟೇಶ್, ಮಸ್ಕಾನ್, ಶಾಹಿನ, ರೇಷ್ಮ, ಮೆಹಬೂಬಿ, ಮಮ್ತಾಜ್ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.