ಸಾರಾಂಶ
ಹೊನ್ನಾವರ: ದೇಶದಲ್ಲಿ ಹೆಣ್ಣುಮಕ್ಕಳಿಗೆ ಕೊಡುವ ಗೌರವ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಪಹಲ್ಗಾಮ್ ನಲ್ಲಿ ನಡೆದ ನರಮೇಧಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿ, ಹಳೆಯ ಭಾರತ ಇದಲ್ಲ, ಇದು ಹೊಸ ಭಾರತ, ಜ್ವಾಜಲ್ಯ ಭಾರತ ಎನ್ನುವುದನ್ನು ನಿರೂಪಿಸಿದೆ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಅವರು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಹೋರಾಟ ಆಪರೇಷನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆಯ ಸೇನಾ ಪಡೆಗಳಿಗೆ ಗೌರವ ಸಲ್ಲಿಸಲು ಹೊನ್ನಾವರದಲ್ಲಿ ತಾಲೂಕು ಮಟ್ಟದ ತಿರಂಗಾ ಯಾತ್ರೆಯನ್ನು ರಾಷ್ಟ್ರ ರಕ್ಷಣೆಗಾಗಿ ಹೊನ್ನಾವರ ನಾಗರಿಕರಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದ ಮೇಕ್ ಇನ್ ಇಂಡಿಯಾವನ್ನು ಜಾರಿಗೆ ತಂದಾಗ ಅದನ್ನು ವ್ಯಂಗ್ಯ ಮಾಡಲಾಗಿತ್ತು. ಆದರೆ ಈಗ ಅದೇ ಮೇಕ್ ಇನ್ ಇಂಡಿಯಾದ ಯುದ್ಧ ವಿಮಾನಗಳೇ ಇಂದು ಶತ್ರು ರಾಷ್ಟ್ರವನ್ನು ನಿರ್ಣಾಮ ಮಾಡಿದೆ. ನಮ್ಮ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಯಾವುದೋ ಬಾಲಿವುಡ್ ಸ್ಟಾರ್, ಕ್ರಿಕೆಟ್ ಸ್ಟಾರ್ ನಮಗೆ ಮಾಡೆಲ್ ಆಗುವ ಬದಲು ದೇಶ ಕಾಯೋ ಸೈನಿಕ ನಮಗೆ ಮಾಡೆಲ್ ಆಗಿರಬೇಕು. ತಮ್ಮ ಜೀವನದ ಯೌವನಾವಸ್ಥೆಯನ್ನು ದೇಶಕ್ಕಾಗಿ ನೀಡುವ, ಮನೆಯಲ್ಲಿ ನಾವು ಆರಾಮವಾಗಿ ಕಾಲ ಕಳೆಯಲು ಕಾರಣರಾದವರ ಬಗ್ಗೆ ಸದಾಕಾಲ ಗೌರವ ಇಟ್ಟುಕೊಳ್ಳಬೇಕು ಎಂದು ಪ್ರೇರಣಾದಾಯಕ ನುಡಿಗಳನ್ನಾಡಿದರು.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬ್ರಹತ್ ತಿರಂಗ ಯಾತ್ರೆ ಹೊನ್ನಾವರದ ಗೇರುಸೊಪ್ಪಾ ಸರ್ಕಲ್ ನಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ತಿರಂಗ ಯಾತ್ರೆ ಸಾಗಿ ಶರಾವತಿ ವ್ರತ್ತದ ಬಳಿ ಸಮಾರೋಪಗೊಂಡಿತು.ಈ ವೇಳೆ ತಾಲೂಕಿನ ಮಾಜಿ ಸೈನಿಕರು, ಬಿಜೆಪಿ ಮುಖಂಡರು, ಜನಸಾಮಾನ್ಯರು , ಕಾಲೇಜು ವಿದ್ಯಾರ್ಥಿಗಳು ತಿರಂಗಯಾತ್ರೆಯಲ್ಲಿ ಭಾವಹಿಸಿದ್ದರು.