ನರೇಗಾ: 200 ದಿನಗಳ ಕೆಲಸ, ₹600 ಕೂಲಿ ನೀಡಲು ಆಗ್ರಹ

| Published : Oct 13 2023, 12:15 AM IST

ಸಾರಾಂಶ

ರಸ್ತಾಪುರ ಗ್ರಾಪಂ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ, ಮನವಿ ಸಲ್ಲಿಕೆ
ಶಹಾಪುರ: ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಹಾಗೂ ಕೆಲಸದ ದಿನಗಳು, ಕೂಲಿ ಹೆಚ್ಚಿಸಬೇಕು. ಜೊತೆಗೆ ಮೇಟಿಗಳಿಗೆ ಸರ್ಕಾರ ಆದೇಶಿಸಿರುವ ಸಹಾಯಧನ ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡುವಂತೆ ಒತ್ತಾಯಿಸಿ ತಾಲೂಕಿನ ರಸ್ತಾಪುರ ಗ್ರಾಮ ಪಂಚಾಯಿತಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಮಾತನಾಡಿ, ಶಹಾಪುರ ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಕೃಷಿ ಕೂಲಿಕಾರರಿಗೆ ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆಲಸ ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಮಾಡಲಾಗದೆ ಗ್ರಾಮವನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವರ್ಷಕ್ಕೆ 200 ದಿನಗಳ ಕೆಲಸ ಕೊಡಬೇಕು. ದಿನಕ್ಕೆ 600 ರು.ಗಳ ಕೂಲಿ ಕೊಡಬೇಕು ಎಂದು ಒತ್ತಾಯಿಸಿದರು. 200 ದಿನಗಳ ಕೆಲಸ ಕಡ್ಡಾಯವಾಗಿ ನೀಡಬೇಕು. 200 ದಿನಗಳ ಕೆಲಸ ನೀಡದಿರುವ ಕೂಲಿಕಾರ ಕುಟುಂಬಗಳಿಗೆ ಇನ್ನುಳಿದ ದಿನಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು. ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಕೂಲಿಕಾರರು ಗುಳೆ ಹೋಗದಂತೆ ತಡೆಯಬೇಕು. ತಡೆಯಲು ವಿಫಲವಾದಲ್ಲಿ ಗುಳೆ ಹೋದಂತಹ ಕೂಲಿಕಾರ ಕುಟುಂಬಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಒತ್ತಾಯಿಸಿದರು. ಸಂಘದ ತಾಲೂಕಾಧ್ಯಕ್ಷ ರಂಗಮ್ಮ ಕಟ್ಟಿಮನಿ, ಮಲ್ಲಪ್ಪ ಸೇರಿದಂತೆ ಅನೇಕ ಕೂಲಿಕಾರರು ಪ್ರತಿಭಟನೆಯಲ್ಲಿದ್ದರು.