ಸಾರಾಂಶ
ಜು. ೧೩ರಂದು ಶಾಸಕರಿಗೆ ಮತ್ತು ತಹಸೀಲ್ದಾರರಿಗೆ ಮನವಿ ಸಲ್ಲಿಸಲು ಅಂದು ಬೆಳಗ್ಗೆ ೯.೩೦ ಕ್ಕೆ ಸಂಘದ ಎಲ್ಲ ಸದಸ್ಯರು ನೌಕರರ ಭವನದ ಹತ್ತಿರ ಇರಬೇಕೆಂದು ನಿರ್ಣಯಿಸಲಾಯಿತು.
ಯಲ್ಲಾಪುರ: ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜು. ೧೦ರಂದು ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಮತ್ತು ಎಲ್ಲ ವೃಂದ ಸಂಘಗಳ ಪದಾಧಿಕಾರಿಗಳ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಪ್ರಕಾಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯು ಕೈಗೊಂಡ ನಿರ್ಣಯದಂತೆ ೭ನೇ ವೇತನ ಆಯೋಗ ನೀಡಿದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು, ಎನ್ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು, ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಮುಂತಾದ ಎಲ್ಲ ಆಗ್ರಹಗಳಿಗೆ ಸಭೆಯಲ್ಲಿ ಎಲ್ಲ ವೃಂದಸಂಘದವರು ಒಮ್ಮತ ಸೂಚಿಸಿದರು.ಜು. ೧೩ರಂದು ಶಾಸಕರಿಗೆ ಮತ್ತು ತಹಸೀಲ್ದಾರರಿಗೆ ಮನವಿ ಸಲ್ಲಿಸಲು ಅಂದು ಬೆಳಗ್ಗೆ ೯.೩೦ ಕ್ಕೆ ಸಂಘದ ಎಲ್ಲ ಸದಸ್ಯರು ನೌಕರರ ಭವನದ ಹತ್ತಿರ ಇರಬೇಕೆಂದು ನಿರ್ಣಯಿಸಲಾಯಿತು.
ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ಪ್ರೌ.ಶಾ.ಶಿ. ಸಂಘದ ತಾಲೂಕಾಧ್ಯಕ್ಷ ಅಜಯ ನಾಯಕ, ನ್ಯಾಯಾಂಗ ಇಲಾಖೆಯ ರಾಮಚಂದ್ರ ಹಾಗೂ ಜಿ.ಎಸ್. ಪತ್ರೇಕರ, ನಿವೃತ್ತ ನೌಕರರ ಸಂಘದ ಎಸ್.ಎಂ. ಜಾಲಿಸತ್ಗಿ, ಉಪ ವಲಯಾರಣ್ಯಾಧಿಕಾರಿಗಳ ಸಂಘದ ಶ್ರೀನಿವಾಸ ನಾಯಕ, ರಾಜ್ಯ ಸರ್ಕಾರಿ/ಆರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ಜಿ. ಸಂತೋಷ್, ಆರ್ಡಬ್ಲ್ಯುಎಸ್ ಸಂತೋಷ್ ಬಂಟ, ಪಿಡಿಒ ಸಂಘದ ನಾರಾಯಣ ಗೌಡ, ಆರೋಗ್ಯ ಇಲಾಖೆಯ ಜಿ.ಎಂ. ಭಟ್ಟ ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೊಜನೂರ ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಸಂಜೀವಕುಮಾರ್ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಎಸ್.ಆರ್. ನಾಯಕ ವಂದಿಸಿದರು.