ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಸುತ್ತಲಿನ ಜಾಗವನ್ನು ಸರ್ವೆ ಮಾಡಿ ಹದ್ದುಬಸ್ತ್‌ಗೆ ಹಾಕುವುದು ಅತ್ಯವಶ್ಯ

ಕನಕಗಿರಿ: ಇಲ್ಲಿನ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದ ಸುತ್ತಲಿನ ಜಾಗವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಹಿಂದೂ ಪರ ಸಂಘಟನೆಯ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

ಹಿಂದೂ ಪರ ಸಂಘಟನೆಯ ಮುಖಂಡ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಸುತ್ತಲಿನ ಜಾಗವನ್ನು ಸರ್ವೆ ಮಾಡಿ ಹದ್ದುಬಸ್ತ್‌ಗೆ ಹಾಕುವುದು ಅತ್ಯವಶ್ಯವಿದೆ. ದೇವಸ್ಥಾನದ ಹೆಸರಿನಲ್ಲಿ ಜಮೀನು ಎಲ್ಲೆಲ್ಲಿ? ಎಷ್ಟು? ಇದೆ ಎಂದು ಪತ್ತೆ ಹಚ್ಚಿ ವಶಪಡಿಸಿಕೊಳ್ಳಬೇಕು ಎಂದರು.

ರೈತ ಸಂಘದ ಅಧ್ಯಕ್ಷ ಗಣೇಶ ರೆಡ್ಡಿ ಮಾತನಾಡಿ, ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಾಪಾರ ಮಳಿಗೆಗಳ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ನಡೆಸಬೇಕು. ಸದ್ಯ ಬಾಡಿಗೆ ಇದ್ದ ಕೆಲ ವ್ಯಾಪಾರಸ್ಥರು ಅನೇಕ ವರ್ಷಗಳಿಂದ ಬಾಡಿಗೆ ಕಟ್ಟದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಾಕಿ ಇರುವ ಬಾಡಿಗೆ ಹಣವನ್ನು ವಸೂಲಿ ಮಾಡಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗಳ ನಿಯಮದಂತೆ ಟೆಂಡರ್ ನಡೆಸಬೇಕು ಎಂದು ಆಗ್ರಹಿಸಿದರಲ್ಲದೇ, ಪ್ರತಿ ವರ್ಷ ಯುಗಾದಿ ಆನಂತರ ತೆಂಗಿನಕಾಯಿ, ಸಂತೆ, ಕುಂಕುಮ ಇತರ ವ್ಯಾಪಾರಕ್ಕೆ ಹರಾಜು ಮಾಡಲಾಗುತ್ತಿದ್ದು, ಯುಗಾದಿ ಮುಗಿದು 10 ದಿನ ಕಳೆದರೂ ಹರಾಜು ಮಾಡಿಲ್ಲ. ಈ ಹಳೆಯ ಹರಾಜುದಾರರೇ ವ್ಯಾಪಾರ ಮಾಡುತ್ತಿದ್ದು, ಅದನ್ನು ರದ್ದುಗೊಳಿಸಿ ದೇವಸ್ಥಾನದಿಂದ ಕಾಯಿ, ಸಂತೆ ಹರಾಜು ವ್ಯಾಪಾರ ಮಾಡಬೇಕು. ಸರ್ವೆ ಮಾಡಿದ ಆನಂತರ ದೇವಸ್ಥಾನದಲ್ಲಿನ ನಾನಾ ವ್ಯಾಪಾರ ವಹಿವಾಟಿನ ಹರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಹುಲಿಗೆಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ, ದೇವಸ್ಥಾನ ಕಾರ್ಯದರ್ಶಿ ಸಿದ್ಧಲಿಂಗಯ್ಯಸ್ವಾಮಿ, ಪ್ರಮುಖರಾದ ಹನುಮಂತರೆಡ್ಡಿ, ವೆಂಕಟೇಶ ವಕೀಲ, ವಿಷ್ಣುವರ್ಧನರೆಡ್ಡಿ, ನರಸಪ್ಪ ನಾಯಕ, ಯಂಕಾರೆಡ್ಡಿ ಓಣಿಮನಿ, ಪ್ರಕಾಶ ತೆಂಗಿನಕಾಯಿ, ಬಿ. ಕನಕಪ್ಪ ಇತರರಿದ್ದರು.