ಶ್ರೀಗಂಧ ಬೆಳೆ ನಿರ್ಬಂಧ ತೆರವಿಗೆ ಆಗ್ರಹ

| Published : Oct 27 2023, 12:30 AM IST

ಸಾರಾಂಶ

ಶ್ರೀಗಂಧ ಬೆಳೆ ನಿರ್ಬಂಧ ತೆರವಿಗೆ ಆಗ್ರಹ
ಚಿಕ್ಕಮಗಳೂರು: ಬರಗಾಲ, ಬೆಳೆ ನಷ್ಟ, ಬೆಲೆ ಕುಸಿತ ಮತ್ತಿತರೆ ಅನೇಕ ಕಾರಣದಿಂದ ತತ್ತರಿಸಿ ಹೋಗಿರುವ ರೈತಾಪಿ ವರ್ಗಕ್ಕೆ ಶ್ರೀಗಂಧದ ಬೆಳೆ ಬೆಳೆಯುವ ಬಗ್ಗೆ ಇರುವ ನಿರ್ಬಂಧವನ್ನು ಸರಕಾರ ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಸುಂದರೇಗೌಡ ಆಗ್ರಹಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಂಧ ಬೆಳೆಯಲು ಉತ್ತೇಜನ ನೀಡುವ ನಿಟ್ಟಿನಲ್ಲಿ ತಾಲೂಕು ಸಂಘ ರಚಿಸಿದ್ದು ಅಧ್ಯಕ್ಷರಾಗಿ ಎಂ.ಸಿ.ಬಸವರಾಜು , ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಕೆ.ಬಿ.ಲೋಕೇಶ್ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು. ಮುಂದಿನ ವರ್ಷಕ್ಕೆ ಜಿಲ್ಲೆಯಲ್ಲಿ ಒಂದು ಸಾವಿರ ರೈತರನ್ನು ಶ್ರೀಗಂಧದ ಬೆಳೆಗಾರರ ಸಂಘಕ್ಕೆ ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ನಾಡಿನ ಸಂಪತ್ತಾಗಿರುವ ಶ್ರೀಗಂಧಕ್ಕೆ ಪುನರುಜ್ಜೀವನ ನೀಡಲಿದ್ದೇವೆ. ಈ ನಿಟ್ಟಿನಲ್ಲಿ ಶ್ರೀಗಂಧ ಬೆಳೆಯನ್ನು ಅರಣ್ಯ ಇಲಾಖೆ ತೆಕ್ಕೆಯಿಂದ ಬಿಡಿಸಿ ತೋಟಗಾರಿಕೆ ಇಲಾಖೆಗೆ ವರ್ಗಾಯಿಸುವ ಪ್ರಯತ್ನವನ್ನು ರಾಜ್ಯ ಸಂಘ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಏಕಗವಾಕ್ಷಿ ಯೋಜನೆ ತರಬೇಕು ಎಂಬ ಆಗ್ರಹ ಕೂಡ ಮಾಡಿದ್ದೇವೆ ಎಂದು ತಿಳಿಸಿದರು. ಸಂಘದ ಎರಡನೆ ವರ್ಷದ ಮಹಾಸಭೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಹಾಜನಹಳ್ಳಿಯಲ್ಲಿ ಆಯೋಜಿಸಿದ್ದೇವೆ. ಅಲ್ಲಿ ಶ್ರೀಗಂಧಕ್ಕೆ ಕಂಟಕವಾಗಿರುವ ಸ್ಪೈಕ್ ರೋಗ ತಡೆಯುವ ಬಗ್ಗೆ ವಿಚಾರ ಸಂಕಿರಣ ಇದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಗಂಧ ಮತ್ತು ವನಕೃಷಿ ಸಂಘದ ಪದಾಧಿಕಾರಿಗಳಾದ ಎಂ.ಸಿ.ಬಸವರಾಜು, ಬಿ.ಸಿ.ವೀರಭದ್ರಯ್ಯ, ವಿಜಯ್‌ಕುಮಾರ್, ಪರಮೇಶ್ವರಪ್ಪ, ಕೆ.ಬಿ.ಲೋಕೇಶ್ ಉಪಸ್ಥಿತರಿದ್ದರು.