ರಾಷ್ಟ್ರಮಟ್ಟದ ವಿಜೇತರಿಗೆ ವೇತನ ಬಡ್ತಿಗೆ ಒತ್ತಾಯ

| Published : Apr 09 2025, 12:34 AM IST

ಸಾರಾಂಶ

ವಿದ್ಯಾರ್ಥಿಗಳ ಕ್ರೀಡಾಸಕ್ತಿ ಪೋಷಿಸಿ, ಕ್ರೀಡಾಪಟು ತಯಾರಿಸುವ ದೈಹಿಕ ಶಿಕ್ಷಣ ಶಿಕ್ಷಕರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದರೆ ಅವರ ವೇತನ ಬಡ್ತಿಗಾಗಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಜುಮಣ್ಣನವರ್ ಹೇಳಿದರು.

ಕೊಪ್ಪಳ:

ಕ್ರೀಡೆಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ. ವಿದ್ಯಾರ್ಥಿಗಳ ಕ್ರೀಡಾಸಕ್ತಿ ಪೋಷಿಸಿ, ಕ್ರೀಡಾಪಟು ತಯಾರಿಸುವ ದೈಹಿಕ ಶಿಕ್ಷಣ ಶಿಕ್ಷಕರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದರೆ ಅವರ ವೇತನ ಬಡ್ತಿಗಾಗಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಜುಮಣ್ಣನವರ್ ಭರವಸೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪ್ರಥಮ‌ ಬಾರಿಗೆ ಜರುಗಿದ ಕೊಪ್ಪಳ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ‌‌ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಈ ವರೆಗೂ ದೈಹಿಕ ಶಿಕ್ಷಕರು ಆಟೋಟ ನಡೆಸಿ, ಕ್ರೀಡಾಪಟುಗಳಿಗೆ ವೇದಿಕೆ ನೀಡುತ್ತಿದ್ದರು. ಈಗ ಮೊದಲ ಸಲ ಅವರಿಗಾಗಿಯೇ ಕ್ರೀಡಾಕೂಟ ನಡೆಯುತ್ತಿದ್ದು, ದೈಹಿಕ ಶಿಕ್ಷಕರ ಆಟೋಟ ನೋಡುವ ಅವಕಾಶ ಲಭಿಸಿದೆ. ಇಂಥ ಕ್ರೀಡಾಕೂಟಗಳು ಹೆಚ್ಚಾಗಲಿ, ಆ ಮೂಲಕ ದೈಹಿಕ ಶಿಕ್ಷಕರು ಮತ್ತಷ್ಟು ಸದೃಢರಾಗಲಿ ಎಂದು ಆಶಿಸಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್‌ಗೌಡರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ ಕುಷ್ಟಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕ್ರೀಡಾ ಕಾರ್ಯದರ್ಶಿ ಮಂಜುನಾಥ ಆರೆಂಟನೂರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸರಸ್ವತಿ, ವೀರನಗೌಡ, ವೀರೇಶ ಅಂಗಡಿ, ಉಮಾದೇವಿ, ಬಸವರಾಜ ಬಂಡಿಹಾಳ ಇದ್ದರು.