ಸಾರಾಂಶ
ಸಿದ್ದಾಪುರ ಪಟ್ಟಣದ ಸಮಾಜ ಮಂದಿರದ ಕುರಿತಾದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬಾಡಿಗೆಗೆ ನೀಡಿರುವ ಪಪಂ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ ಮಧುಸೂದನ ಕುಲಕರ್ಣಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಿದ್ದಾಪುರ: ಪಟ್ಟಣದ ಸಮಾಜ ಮಂದಿರದ ಕುರಿತಾದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬಾಡಿಗೆಗೆ ನೀಡಿರುವ ಪಪಂ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ ಮಧುಸೂದನ ಕುಲಕರ್ಣಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶಿರಸಿ-ಸಿದ್ದಾಪುರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಸರ್ವೆ ನಂ. ೨೬೭/ಬ೨ರಲ್ಲಿ ೧ ಎಕರೆ ಪ್ರದೇಶವನ್ನು ೧೯೫೦ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರಿಗೆ ಮಂಜೂರು ಮಾಡಿಕೊಡಲಾಗಿತ್ತು. ೨೦೧೩ರ ವರೆಗೆ ದಾಖಲೆಗಳಲ್ಲಿ ಇದೇ ರೀತಿ ಇದ್ದಿದ್ದು ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನಧಿಕೃತವಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿಗೆ ವರ್ಗಾಯಿಸಲಾಗಿತ್ತು. ಈ ಕುರಿತು ಎಲ್ಲ ದಾಖಲೆಗಳೊಂದಿಗೆ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿತ್ತು. 2023 ನ. 23ರಂದು ನ್ಯಾಯಾಲಯ ಈ ಜಾಗವನ್ನು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್, ಸಿದ್ದಾಪುರ ಹೆಸರಿಗೆ ವರ್ಗಾಯಿಸುವಂತೆ ಆದೇಶಿಸಿತ್ತು. ಆದರೆ ಇಲ್ಲಿಯವರೆಗೆ ಈ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಮಾಡಿಲ್ಲ. ಫೆ. ೨೬ರಂದು ಪಪಂ ಮುಖ್ಯಾಧಿಕಾರಿ ₹10 ಸಾವಿರ ಮುಂಗಡ ಪಡೆದು ಈ ಜಾಗವನ್ನು ಅನಧಿಕೃತವಾಗಿ ಬಾಡಿಗೆ ನೀಡಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದ್ದು, ನ್ಯಾಯಾಲಯಕ್ಕೆ ಅಗೌರವ ತೋರಿಸಿರುವ, ನಿಂದನೆ ಮಾಡಿರುವ ಮುಖ್ಯಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಾರುತಿ ಕಿಂದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಹೆಗಡೆ, ಪ್ರಮುಖರಾದ ವಿ.ಎನ್. ನಾಯ್ಕ, ಗಾಂಧೀಜಿ ನಾಯ್ಕ, ಸುರೇಂದ್ರ ಗೌಡ, ಲೀನಾ ಫರ್ನಾಂಡಿಸ್, ಶಾರದಾ ಹೆಗಡೆ, ಕೆ.ಟಿ. ಹೊನ್ನೆಗುಂಡಿ ಮುಂತಾದವರು ಉಪಸ್ಥಿತರಿದ್ದರು.