ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಹರಿಸದಿರುವಂತೆ ಆಗ್ರಹಿಸಿ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಆಗ್ರಹಿಸಿ ಕರುನಾಡ ವಿಜಯಸೇನೆ, ಸಮೃದ್ಧಿ ಕರುನಾಡು ರಕ್ಷಣಾ ವೇದಿಕೆಯಿಂದ

ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಖಾಲಿ ಕೊಡ, ಖಾಲಿ ಚೆಂಬನ್ನು ತಲೆ ಮೇಲೆ ಹೊತ್ತು ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಬರಗಾಲ ಎದುರಾಗಿದ್ದರೂ ತಮಿಳುನಾಡು ನೀರು ಬಿಡುವಂತೆ ಖ್ಯಾತೆ ತೆಗೆಯುತ್ತಿದೆ. ಇದುವರೆವಿಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಕಾವೇರಿ ನದಿ ನೀರಿನ ವಿಚಾರವಾಗಿ ಕೇಂದ್ರ ಸರ್ಕಾರಕ್ಕಾಗಲಿ, ತಮಿಳುನಾಡು ಸರ್ಕಾರಕ್ಕಾಗಲಿ ನೀರು ಬಿಡುವುದಿಲ್ಲವೆಂಬ ಖಡಕ್ ಸಂದೇಶವನ್ನು ನೀಡಲೆ ಇಲ್ಲ. ಅಧಿಕಾರಕ್ಕಾಗಿ ಹಾತೊರೆಯುವ ಬದಲು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ರಾಜಿನಾಮೆ ನೀಡಿ ಕನ್ನಡ, ನಾಡು, ನುಡಿ, ನೆಲ, ಜಲದ ಬಗ್ಗೆ ಅಭಿಮಾನ ತೋರುವುದು ಒಳ್ಳೆಯದೆಂದು ಆಗ್ರಹಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ನಗರಾಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಮುಜಾಹಿದ್, ಸಮೃದ್ಧಿ ಕರುನಾಡು ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆ.ರಂಗಸ್ವಾಮಿ, ರಾಜ್ಯ ಉಪಾಧ್ಯಕ್ಷ ದೇವರಾಜ್ ಎಸ್. ಗೌರವಾಧ್ಯಕ್ಷ ಆರ್.ಮಂಜುನಾಥ, ಚಂದ್ರಮ್ಮ, ಅಭಿಷೇಕ್, ಆಕಾಶ್, ಕೃತಿಕ್ ರಂಗಸ್ವಾಮಿ, ಗಿರೀಶ್, ಮದನ್, ಲಿಖಿತ್, ಸುದೀಪ್, ದೇವರಾಜ, ಸ್ವಾಮಿ, ಲಿಂಗರಾಜ್, ಕೆ.ಸಿದ್ದಪ್ಪ, ಧನುಷ್, ರಾಕೇಶ್ ಇದ್ದರು.