ಕೊಳಚೆ ನಿವಾಸಿಗರಿಗೆ ನಿವೇಶನ ನೀಡಬೇಕೆಂದು ಆಗ್ರಹ

| Published : Aug 24 2024, 01:18 AM IST

ಸಾರಾಂಶ

ಕಡೂರು, ಕೊಳಚೆ ನಿವಾಸಿಗರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ, ಡಿಎಸ್‍ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕರ್ನಾಟಕ ಜನ ಶಕ್ತಿ ರಾಜ್ಯ ಸಮಿತಿ, ಜಿಲ್ಲಾ ಹಾಗೂ ಕಡೂರು ತಾಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಸಹಯೋಗದಲ್ಲಿ ಅಂಬೇಡ್ಕರ್ ಪ್ರತಿಮೆಯಿಂದ ತಾಲೂಕು ಕಚೇರಿಗೆ ತೆರಳಿ ಪ್ರತಿಭಟಿಸಿದರು.

- ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ, ಡಿಎಸ್‍ಎಸ್ ಸಂಘಟನೆಗಳಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕಡೂರು

ಕೊಳಚೆ ನಿವಾಸಿಗರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ, ಡಿಎಸ್‍ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕರ್ನಾಟಕ ಜನ ಶಕ್ತಿ ರಾಜ್ಯ ಸಮಿತಿ, ಜಿಲ್ಲಾ ಹಾಗೂ ಕಡೂರು ತಾಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಸಹಯೋಗದಲ್ಲಿ ಅಂಬೇಡ್ಕರ್ ಪ್ರತಿಮೆಯಿಂದ ತಾಲೂಕು ಕಚೇರಿಗೆ ತೆರಳಿ ಪ್ರತಿಭಟಿಸಿದರು.

ಕರ್ನಾಟಕ ಜನ ಶಕ್ತಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಗೌಸ್ ಮೊಹಿದ್ದೀನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, 2018ರಲ್ಲಿ ಪಟ್ಟಣದ ಈದ್ಗಾ ನಗರದ ಸರ್ವೆ.ನಂ 53 ರಲ್ಲಿ 40-50 ವರ್ಷಗಳಿಂದ ವಾಸವಾಗಿದ್ದ ಬಡ ಕುಟುಂಬಗಳನ್ನು ಏಕಾಏಕಿ ತಾಲೂಕು ಆಡಳಿತ ಮತ್ತು ಪುರಸಭೆಯು ಖಾಲಿ ಮಾಡಿಸಿದೆ.

ತೆರವು ಮಾಡಿಸಿದ್ದ ಕೆಲವರಿಗೆ ಹಕ್ಕುಪತ್ರ ನೀಡಲಾಗಿತ್ತು. ಹಾಗೂ ಕಂದಾಯ ಕಟ್ಟಿಸಿಕೊಂಡು ತೆರವುಗೊಳಿಸುವ ಸಮಯದಲ್ಲಿ ಬದಲಿ ವ್ಯವಸ್ಥೆಗೆ ಭರವಸೆಯನ್ನೂ ನೀಡಿದ್ದರು. ಅದರೆ ಅಲ್ಲಿಂದ ವಕ್ಕಲೆಬ್ಬಿಸಿದ್ದ ಸಂತ್ರಸ್ತರಿಗೆ ಇದುವರೆವಿಗೂ ನಿವೇಶನ ನೀಡಲಿಲ್ಲ. ಈ ಕುರಿತು ಅನೇಕ ಭಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪರಿಹಾರ ದೊರಕಿಲ್ಲ. ಈ ಎಲ್ಲ ಕುಟುಂಬಗಳು ಅತಂತ್ರ ಪರಿಸ್ಥಿತಿಯಲ್ಲಿ ಬದುಕು ನಡೆಸಬೇಕಾಗಿದೆ. ಆದ್ದರಿಂದ ಕೊಳಚೆ ಪ್ರದೇಶದಿಂದ ತೆರವುಗೊಳಿಸಿದ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಸಿಕೊಡಬೇಕೆಂದು ಮನವಿ ಮಾಡುತ್ತೇವೆ ಎಂದರು.

ಕರ್ನಾಟಕ ಜನಶಕ್ತಿ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಮುನ್ನಾ ಮಾತನಾಡಿ, ಈದ್ಗಾ ನಗರದಲ್ಲಿ ವಾಸವಿದ್ದ ಕುಟುಂಬಗಳನ್ನು ವಕ್ಕಲೆಬ್ಬಿಸಿದ ಪರಿಣಾಮ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಬೇರೆಡೆ ನಿವೇಶನದ ಭರವಸೆ ನೀಡಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಭರವಸೆ ಈಡೇರಲಿಲ್ಲ. ಈಗಲಾದರೂ ಪರ್ಯಾಯವಾಗಿ ಸರ್ವೆ ನಂ.3 ರಲ್ಲಿ ಸರಕಾರಿ ಜಾಗವಿದ್ದು ಅದರಲ್ಲಿ ನಿವೇಶನ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿ, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘಟನೆಯ ಮುಖಂಡರಾದ ಮಂಜಪ್ಪ, ಶ್ರೀಕಾಂತ್, ರೈತ ಮುಖಂಡ ನಿರಂಜನಮೂರ್ತಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಲಕ್ಷ್ಮಣ್,ರಹಮತ್, ಅಜೀಬ್, ಲೋಲಾಕ್ಷಮ್ಮ,ರತ್ನಮ್ಮ, ರಘು, ರಾಜೇಶ್ವರಿ ಫಯಾಜ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

----

23ಕೆಕೆಡಿಯು1: ಕಡೂರು ಪಟ್ಟಣದ ಕೊಳಚೆ ನಿವಾಸಿಗರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ, ಡಿಎಸ್‍ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಿದವು.