ಸಾರಾಂಶ
ಹಾವೇರಿ: ರಾಜ್ಯ ಸರ್ಕಾರ ದೇವನಹಳ್ಳಿ ರೈತರ 1777 ಎಕರೆ ಫಲವತ್ತಾದ ಕೃಷಿಯೋಗ್ಯ ಭೂಮಿಯ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.ನಗರದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಡಿವೈಎಫ್ಐ, ಎಸ್ಎಫ್ಐ, ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ರೈತ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ತಮ್ಮ ಭೂಮಿಯ ಉಳಿವಿಗಾಗಿ ಧ್ವನಿ ಎತ್ತಿದ ಭೂ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಅಮಾನವೀಯವಾಗಿ ದೌರ್ಜನ್ಯವೆಸಗಿರುವುದು ರೈತರಿಗೆ ಬಗೆದ ದ್ರೋಹವಾಗಿದೆ ಎಂದರು.13 ಹಳ್ಳಿಗಳ ತಮ್ಮ 1177 ಎಕರೆ ಭೂಮಿ ಉಳಿಸಿಕೊಳ್ಳಲು 1181 ದಿನಗಳಿಂದ ಪ್ರಜಾತಾಂತ್ರಿಕ ನೆಲೆಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಈ ಭೂ ಒಡೆತನದ ಶೇ. 90ಕ್ಕಿಂತ ಹೆಚ್ಚು ರೈತರು ವಿರೋಧಿಸುತ್ತಿರುವ ಈ ಅನ್ಯಾಯದ ಹಾಗೂ ಬಲವಂತದ ಭೂ ಸ್ವಾಧೀನ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ರೈತರು ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಚನಭ್ರಷ್ಟರಾಗದೇ ಕೊಟ್ಟ ಭರವಸೆಯಂತೆ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಭೂಮಿಯ ಉಳಿವಿಗಾಗಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪ್ರತಿಭಟಿಸುತ್ತಿರುವ ರೈತರು ಹಾಗೂ ಪ್ರತಿಭಟನಾಕಾರರನ್ನು ಬಂಧಿಸಿದ್ದು, ಕೂಡಲೇ ಬಂಧಿಸಿದ ಎಲ್ಲ ಪ್ರತಿಭಟನಾಕಾರರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಸಿಐಟಿಯು ಜಿಲ್ಲಾ ಮುಖಂಡರಾದ ಸಿದ್ದಮ್ಮ ಚೌಟಿ, ಕರ್ನಾಟಕ ರಾಜ್ಯ ರೈತ ಸಂಘ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ, ಅಂಗವಿಕಲರ ಸಂಘಟನೆಯ ಮುಖಂಡರಾದ ಹಸೀನಾ ಹೆಡಿಯಾಲ, ಜಿಲ್ಲಾ ಮಾಜಿ ಸೈನಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಯರೇಶೀಮಿ, ಎಸ್ಎಫ್ಐ- ಡಿವೈಎಫ್ಐ ಮುಖಂಡರಾದ ಸುನೀಲಕುಮಾರ ಎಲ್., ವಸಂತ ವಡ್ಡರ, ಪ್ರಜ್ವಲ್ ಭದ್ರಣ್ಣನವರ, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.