ಕನ್ನಡ ನಾಮಫಲಕ ಹಾಕಲು ನಿರ್ದೇಶನ ನೀಡುವಂತೆ ಆಗ್ರಹ

| Published : Feb 08 2024, 01:33 AM IST

ಸಾರಾಂಶ

ನಗರದ ಎಲ್ಲ ನಾಮಫಲಕಗಳು ಕನ್ನದಲ್ಲಿ ಇರಬೇಕು ಎಂಬುದು ನಮ್ಮ ಉದ್ದೇಶವೇ ಹೊರತೂ ಬೇರೇನೂ ಇಲ್ಲ.

ಶಿಗ್ಗಾಂವಿ ಪುರಸಭೆಗೆ ಕರವೇ ತಾಲೂಕು ಘಟಕ ಮನವಿ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಕನ್ನಡ ನಾಮಫಲಕ ಹಾಕದ ವಾಣಿಜ್ಯ ಮಳಿಗೆಗಳಿಗೆ ಮತ್ತು ಹಾಗೂ ಜಾಹೀರಾತುಗಳ ಮಾಲೀಕರಿಗೆ ಕನ್ನಡ ಬಳಸುವಂತೆ ಸೂಕ್ತ ನಿರ್ದೇಶನ ನೀಡಬೇಕು. ಕನ್ನಡ ನಾಮಫಲಕ ಹಾಕಲು ಅವಧಿ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗಳಿ ಅವರಿಗೆ ಕರವೇ ತಾಲೂಕು ಘಟಕ ಮನವಿ ಸಲ್ಲಿಸಿತು.

ಕರವೇ ಘಟಕದ ತಾಲೂಕಾಧ್ಯಕ್ಷ ಹಾಗೂ ವಕೀಲ ಸಂತೋಷಗೌಡ ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎನ್ನುವುದು ಕನಿಷ್ಠ ಸಾಮಾನ್ಯ ವಿಚಾರ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡದ ದುರಂಕಾರಿಗಳಿಗೆ ಮೊದಲು ನಮ್ಮ ಧಿಕ್ಕಾರ. ನಗರದ ಎಲ್ಲ ನಾಮಫಲಕಗಳು ಕನ್ನದಲ್ಲಿ ಇರಬೇಕು ಎಂಬುದು ನಮ್ಮ ಉದ್ದೇಶವೇ ಹೊರತೂ ಬೇರೇನೂ ಇಲ್ಲ ಎಂದರು.

ತಾಲೂಕಿನ ಪುರಸಭೆ ವ್ಯಾಪ್ತಿಗೆ ಬರುವ ವಾಣಿಜ್ಯ ಮಳಿಗೆಗಳು ಹಾಗೂ ಅಳವಡಿಸಿರುವ ಜಾಹಿರಾತುಗಳಲ್ಲಿ ಶೇ. ೬೦ ಕನ್ನಡ ಭಾಷೆ ಬಳಸದೆ ಇರುವ ಮಳಿಗಳಿಗೆ ಮತ್ತು ಜಾಹೀರಾತುದಾರರಿಗೆ ಕನ್ನಡ ಬಳಸುವಂತೆ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೆ ಅಂಗಡಿ ನಾಮಫಲಕ, ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆದೇಶ ಮಾಡಬೇಕು. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಕಾಲವಕಾಶ ನಿಗದಿ ಮಾಡಬೇಕು. ಅದರ ಒಳಗಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತಾಗಬೇಕು. ಸರ್ಕಾರದ ಆದೇಶವನ್ನು ಯಥಾವತ್ ಪಾಲಿಸುವಂತಾಗಬೇಕು ಎಂದು ಪಾಟೀಲ್ ಹೇಳಿದರು.

ಫೆ. 28ರೊಳಗೆ ಸರ್ಕಾರದ ಆದೇಶ ಪಾಲಿಸದ ವ್ಯಾಪಾರಸ್ಥರ ಪರವಾನಗಿ ರದ್ದು ಮಾಡಬೇಕು. ಜತೆಗೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಸೂಕ್ತ ಕ್ರಮವಾಗದಿದ್ದರೆ ಕರವೇ ಹೋರಾಟ ನಡೆಸಲಿದೆ ಎಂದು ಹೇಳಿದರು.

ಸಂತೋಷಗೌಡ ಜ. ಪಾಟೀಲ, ಮೆಹಬೂಬ ಮಸೂತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ ಬಳ್ಳಾರಿ, ವಿಜಯ ಇಳಗೇರ, ಗಣೇಶ ಭಜಂತ್ರಿ, ಮನೋಜ ಹಂಚಗಿ, ಮಂಜುನಾಥ ಗೌಡರ, ನವೀನ ಕುಡಲ, ಅಜಿತ ಕಟ್ಟಿಮನಿ, ತಾಲೂಕು ಕರವೇ ಪದಾಧಿಕಾರಿಗಳು ಹಾಜರಿದ್ದರು.