ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಕಂಪ್ಲಿ: ಶಾಸಕ ಜೆ.ಎನ್. ಗಣೇಶ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಎಮ್ಮಿಗನೂರಿನ ಕಾಂಗ್ರೆಸ್ ಯುವ ಮುಖಂಡ ಕನಕಪ್ಪ ಸುಣಗಾರ್ ಒತ್ತಾಯಿಸಿದರು.

ಎಮ್ಮಿಗನೂರಿನ ತೇರಿನಮನೆ ಆವರಣದಲ್ಲಿ ಮಂಗಳವಾರ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಸಂಘಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಶಾಸಕ ಜೆ.ಎನ್.ಗಣೇಶ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕನಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಗುಣ ಅವರಲ್ಲಿದ್ದು, ಜನಸೇವೆಯೇ ಅವರ ಧ್ಯೇಯವಾಗಿದೆ ಎಂದು ಹೇಳಿದರು.

ಸಚಿವ ಸ್ಥಾನ ದೊರೆತಲ್ಲಿ ರಾಜ್ಯ ಮಟ್ಟದಲ್ಲಿಯೂ ಉತ್ತಮ ಆಡಳಿತ ನೀಡುವ ಸಾಮರ್ಥ್ಯ ಹಾಗೂ ಅನುಭವ ಅವರಿಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸದಾ ಕಾಳಜಿ ವಹಿಸಿದ್ದಾರೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ವಿ.ವೀರೇಶ್ ಮಾತನಾಡಿ, ಜೆ.ಎನ್.ಗಣೇಶ್ ಬಡವರು ಮತ್ತು ಶೋಷಿತ ವರ್ಗಗಳ ಪರವಾಗಿ ಸದಾ ಧ್ವನಿಯಾಗಿದ್ದಾರೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಿ ಪರಿಹಾರ ಒದಗಿಸುವ ಗುಣ ಅವರಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕಾಗೆ ಈರಣ್ಣ, ಗೋವಿಂದರೆಡ್ಡಿ, ಜಡೇಶ್, ಬಸವರಾಜ, ಮುದಿಯಪ್ಪ, ಎಮ್ಮೆ ತಿಪ್ಪಯ್ಯ, ವೈ.ಜಯರಾಮರೆಡ್ಡಿ, ಹೊಸಮನೆ ರಾಜಾಸಾಬ್, ಶರಣಪ್ಪ, ಹೊಸಳ್ಳಿ ಜಡೇಶ್, ಮಳ್ಳೆ ಜಡೆಪ್ಪ, ಅಲ್ಲಾಸಾಬ್, ಎಂ.ಜಡೆಪ್ಪ, ಬಾರಿಕರ ರಾಜ, ಎಂ.ಲಕ್ಷ್ಮೀಕಾಂತ್ ಇದ್ದರು.