ಸಾರಾಂಶ
ಚಾಮರಾಜನಗರ : ಹಾಲು ಉತ್ಪಾದಕರಿಗೆ ಹೆಚ್ಚಳ ಮಾಡಿರುವ 4 ರು. ಜೊತೆಗೆ ಹಿಂದೆ ಇಳಿಸಿದ್ದ 2 ರು. ಅನ್ನು ಸೇರಿಸಿ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘ-ಕರ್ನಾ ಟಕ ಪ್ರದೇಶ ದಕ್ಷಿಣ ಪ್ರಾಂತದ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬಂದ ನಂತರ ಇಲ್ಲಿಯ ತನಕ ಹಾಲಿನ ದರವ ನ್ನು 9 ರು. ಏರಿಕೆ ಮಾಡಿ ರೈತ ಉತ್ಪಾದಿತ ಹಾಲಿಗೆ ಕೇವಲ 4 ರು. ಏರಿಸಲು ತೀರ್ಮಾನಿಸಿದೆ. ಹಿಂದೆ ಇಳಿಸಿದ್ದ 2 ರು ಸೇರಿಸಿ ನೀಡುತ್ತಿಲ್ಲ ಇದರಿಂದ ಹಾಲು ಉತ್ಪಾದಕರಿಗೆ ಸಿಗುತ್ತಿರುವುದು ಕೇವಲ 2 ರು. ಮಾತ್ರ ಎಂದು ತಿಳಿಸಿದರು.
ರೈತರಿಂದ ಹಾಲು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಹಂತದವರೆಗೆ ಕೆಎಂಎಫ್ ಆಪರೇಟಿಂಗ್ ಸಿಸ್ಟಂನ ಖರ್ಚು ಶೇ.65 ರಷ್ಟು ಇದೆ. ಯಾವುದೇ ಒಂದು ಕಂಪನಿಯ ಆಪರೇಟಿಂಗ್ ವೆಚ್ಚ ಕನಿಷ್ಠ ಶೇ.10ರಿಂದ 20ರವರೆಗೆ ವೆಚ್ಚವಾಗುತ್ತದೆ. ಹೊರ ರಾಜ್ಯದಲ್ಲಿ ಖಾಸಗಿಯವರು ಹಾಲು ಖರೀದಿ ಮಾಡಿ ಮಾರಾಟ ಮಾಡುವ ಖರ್ಚು ಶೇ.10 ರಷ್ಟು ಇದೆ ಎಂದರು.
ಕೆಎಂಎಫ್ ಮೊಸರು, ಮಜ್ಜಿಗೆ ಸೇರಿದಂತೆ ಅನೇಕ ಉಪ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಿದೆ. ಆ ಲಾಭವನ್ನೆಲ್ಲ ಭ್ರಷ್ಟ ವ್ಯವಸ್ಥೆ ತಿಂದು ಹಾಕುತ್ತಿದೆ. ಇದಕ್ಕೆ ಕಡಿವಾಣ ಹಾಕದೇ ಸರ್ಕಾರ ಜಾಣ ಕುರುಡು ತೋರಿಸುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿರುವುದು ಸ್ವಾಗತಾರ್ಹ. ತುಂಬಾ ದಿನಗಳ ಹಿಂದೆ ತಿದ್ದುಪಡಿ ಮಸೂದೆ ಜಾರಿಗೆ ತರಬೇಕಿತ್ತು. ರೈಲ್ವೆ, ಸೈನ್ಯ ಬಿಟ್ಟರೆ ಹೆಚ್ಚು ಜಾಗವನ್ನು ವಕ್ಫ್ ಮಂಡಳಿ ಹೊಂದಿದೆ. ವಕ್ಫ್ ಮಂಡಳಿ 8.40 ಲಕ್ಷ ಎಕರೆ ಆಸ್ತಿ ಹೊಂದಿದೆ. ಆದರೆ, ರಾಜ್ಯ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ತರಬಾರದು ಎಂದು ತೀರ್ಮಾನಿಸಿದ್ದು ಖಂಡನೀಯ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿ ಬೋಸ್ಕೊ, ಕೋಶಾಧ್ಯಕ್ಷ ಲಿಂಗರಾಜು, ಚಾಮರಾಜನಗರ ತಾಲೂಕು ಅಧ್ಯಕ್ಷ ಮಹೇಶ್, ಯಳಂದೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಸದಸ್ಯ ಮಣಿಗಾರ್ ಪ್ರಸಾದ್ ಇದ್ದರು.