ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಮಾಜಿ ಸಚಿವ ಬಿ.ಸೋಮಶೇಖರ್ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಅವರ ಅಭಿಮಾನಿ ಬಳಗ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದೆ.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ನಾಗಸುಂದರ ಮಾತನಾಡಿ, ದಿ.ಮಾಜಿ ಸಂಸದ ಆರ್.ಧ್ರುವನಾರಾಯಣ, ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಂತರ ಹಿರಿಯ ರಾಜಕಾರಣಿಯಾದ ಮಾಜಿ ಸಚಿವ ಬಿ.ಸೋಮಶೇಖರ್ ಅವರು ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಸಚಿವರಾಗಿದ್ದ ವೇಳೆಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವರು ಸಮರ್ಥ ನಾಯಕರು ಹೀಗಾಗಿ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.ಎಸ್ಸಿ,ಎಸ್ಟಿ ಪದವೀಧರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಸ್.ಸುರೇಶ್ ಕುಮಾರ್ ಮಾತನಾಡಿ, ಹಿಂದುಳಿದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜ್ಯದಲ್ಲೇ ಹೆಚ್ಚಿನ ಅನುಭವ ಹೊಂದಿದ ಹಿರಿಯ ನಾಯಕ ಬಿ.ಸೋಮಶೇಖರ್ ಅತಂಹವರ ಅಗತ್ಯತೆ ಹೆಚ್ಚಿದ್ದು, ರಾಮಕೃಷ್ಣ ಹೆಗ್ಡೆ ಮತ್ತು ಎಚ್.ಡಿ.ದೇವೇಗೌಡ ಮತ್ತು ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಸಚಿವರಾಗಿ ಹಲವು ಖಾತೆಯನ್ನು ಸಮರ್ಥವಾಗಿ ನಿಭಾಯಿುಸುವ ಮೂಲಕ ಹಲವಾರು ಸುಧಾರಣೆ ತಂದಿದ್ದಾರೆ ಎಂದರು.ಅಂಬೇಡ್ಕರ್ ಅನುಯಾಯಿಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಆಲೂರು ಮಹದೇವಯ್ಯ ಮಾತನಾಡಿ, ಮಾಜಿ ಸಚಿವ ಬಿ.ಸೋಮಶೇಖರ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತರ ವರಿಷ್ಠರು ಕಾಂಗ್ರೆಸ್ ಪಕ್ಷದದಿಂದ ಟಿಕೆಟ್ ಕೂಡಿಸಿ ಸಂಸದರಾಗಿ ಮಾಡಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಸೋಮಣ್ಣ ,ದೊಡ್ಡರಾಯಪೇಟೆ ಯೋಗೀಶ್, ಮುಖಂಡ ಸಿ.ಬಿ.ನಾಗರಾಜುಶೆಟ್ಟಿ, ರಂಗ ನಿರ್ದೇಶಕ ರೂಬಿನ್ ಸಂಜಯ್ ,ಜಾನ್ ಪಾಲ್ ಹಾಜರಿದ್ದರು.