ಸಾರಾಂಶ
ಕನ್ನಡಪ್ರಭ ವಾರ್ತೆ ಸಿರುಗುಪ್ಪ
ರೈತರಿಂದ 20 ಕ್ವಿಂಟಲ್ ಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡಬೇಕು ಹಾಗೂ ಕೂಡಲೇ ಲಾಗಿನ್ ಓಪನ್ ಮಾಡುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ನಗರದ ಸಿಂಧನೂರು ರಸ್ತೆಯಲ್ಲಿರುವ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ರೈತರಿಂದ 20 ಕ್ವಿಂಟಲ್ಗೆ ಬದಲಾಗಿ 10 ಕ್ವಿಂಟಲ್ ಖರೀದಿ ಮಾಡುತ್ತೆವೆಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿ ರೈತರಿಂದ ಜೋಳ ಖರೀದಿ ಮಾಡಿದ್ದರೆ, ಈಗಾಗಲೇ ನಮ್ಮ ತಾಲೂಕಿನ ರೈತರ ಎಲ್ಲಾ ಜೋಳ ಮಾರಾಟವಾಗುತ್ತಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಜೋಳ ಖರೀದಿ ನಿಧಾನವಾಗಿದ್ದು, ಇದರಿಂದ 20ಕ್ವಿಂಟಲ್ ಬದಲಿಗೆ 10ಕ್ವಿಂಟಲ್ ಜೋಳವನ್ನು ರೈತರು ಮಾರಾಟ ಮಾಡುವ ದುಸ್ಥಿತಿಯನ್ನು ಅಧಿಕಾರಿ ವರ್ಗ ತಂದಿದೆ. ರೈತರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಐನಾಥರೆಡ್ಡಿ, ತಾಲೂಕು ಅಧ್ಯಕ್ಷ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ ಮತ್ತು ವಿವಿಧ ಗ್ರಾಮಗಳ ರೈತರು ಮಾತನಾಡಿದರು.ಅಡಿಷನಲ್ ಎಸ್ಪಿ ಕೆ.ಪಿ. ರವಿಕುಮಾರ್, ತಹಶೀಲ್ದಾರ್ ಎಚ್. ನರಸಪ್ಪ, ಕೃಷಿ ಮಾರಾಟ ಮಂಡಳಿ ಜಿಲ್ಲಾ ವ್ಯವಸ್ಥಾಪಕ ಎಂ.ಬಿ. ಶ್ರೀಕಾಂತ್ ಮಾಜಿ ಶಾಸಕರು ಮತ್ತು ರೈತರೊಂದಿಗೆ ಚರ್ಚಿಸಿದರು. ಅಡಿಷ್ನಲ್ ಎಸ್ಪಿ ಮತ್ತು ತಹಶೀಲ್ದಾರ್ ಮಾತನಾಡಿ,
ರೈತರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸೋಮವಾರ ಮಧ್ಯಾಹ್ನದೊಳಗೆ ಲಾಗಿನ್ ಓಪನ್ ಆಗುತ್ತದೆ ಎಂದು ಹೇಳಿ, ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.ನಾವು ಹೆದ್ದಾರಿಯಲ್ಲಿ ಕುಳಿತು ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆಂದು ಮಾಜಿ ಶಾಸಕರು ಮತ್ತು ರೈತರು ಹೆದ್ದಾರಿ ಕಡೆ ಹೋಗಲು ಮುಂದಾದಾಗ ಪೊಲೀಸರು ಹೆದ್ದಾರಿ ತಡೆ ನಡೆಸಬೇಡಿ ಎಂದು ಮನವೊಲಿಸಿದರು.