ಪ್ರಸ್ತಾವಿತ ಕಸ್ತೂರಿರಂಗನ್ ವರದಿ ಅನುಷ್ಠಾನವಾದರೆ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಪ್ರದೇಶದ ಜನರ ದೈನಂದಿನ ಜೀವನ ಅತಂತ್ರವಾಗಲಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿ ಈ ಉದ್ದೇಶಿತ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಶಾಶ್ವತವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ಪಕ್ಷಾತೀತವಾಗಿ ಬಿರುನಾಣಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಶ್ರೀಮಂಗಲ : ಪ್ರಸ್ತಾವಿತ ಕಸ್ತೂರಿರಂಗನ್ ವರದಿ ಅನುಷ್ಠಾನವಾದರೆ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಪ್ರದೇಶದ ಜನರ ದೈನಂದಿನ ಜೀವನ ಅತಂತ್ರವಾಗಲಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿ ಈ ಉದ್ದೇಶಿತ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಶಾಶ್ವತವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ಪಕ್ಷಾತೀತವಾಗಿ ಬಿರುನಾಣಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ಮರೆನಾಡು ನಾಗರಿಕ ವೇದಿಕೆ ಇದರ ನೇತೃತ್ವದಲ್ಲಿ ಬಿರುನಾಣಿ ಪಟ್ಟಣದ ಮುಖ್ಯಬೀದಿಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ, ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು.

ನೂರಾರು ಸಂಖ್ಯೆಯಲ್ಲಿದ್ದ ನಾಗರಿಕರು ಪಟ್ಟಣದ ಜಂಕ್ಷನ್ ನಲ್ಲಿ ಯೋಜನೆಯನ್ನು ರೂಪಿಸಿದ ಡಾ. ಕಸ್ತೂರಿ ರಂಗನ್ ಅವರ ಪ್ರತಿಕೃತಿಯನ್ನು ದಹನ ಮಾಡಿದರು.ಈ ಸಂದರ್ಭ ಮಾತನಾಡಿದ ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ ಈ ಯೋಜನೆಯ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚಾಗಿವೆ, ಹೊರಗಿನವರಿಗೆ ಇಲ್ಲಿ ಜಾಗ ಖರೀದಿಸಲು ಸಾಧ್ಯವಾಗುವುದಿಲ್ಲ, ಇದರಿಂದ ಸ್ಥಳೀಯರ ಜಾಗ ಮಾರಾಟ ಮಾಡದೇ ಉಳಿಯುತ್ತದೆ. ಆಣೆಕಟ್ಟು, ರಾಷ್ಟ್ರೀಯ ಹೆದ್ದಾರಿ ಅಂತಹ ಬೃಹತ್ ಯೋಜನೆಗಳು ಬರುವುದಿಲ್ಲ ಇವುಗಳನ್ನು ಹೊರತುಪಡಿಸಿ ಕ್ರಮೇಣವಾಗಿ, ಈ ಪ್ರದೇಶದ ಜನರ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಕಾಫಿ ಪ್ಲಾಂಟೇಶನ್ ಮಾಡಲು ಬಹಳಷ್ಟು ನಿರ್ಬಂಧಗಳು ಬರುತ್ತವೆ ಎಂದರು.ರಸಗೊಬ್ಬರ, ರಾಸಾಯನಿಕ ಸಿಂಪಡಣೆ ಬಳಕೆಗೆ ನಿರ್ಬoಧ ಬೀಳುತ್ತದೆ. ಮರದ ನೆರಳು ತೆರವುಗೊಳಿಸಲು ಪ್ಲಾಂಟೇಶನ್ ನಿರ್ವಹಣೆಗೆ ತೊಂದರೆಯಾಗಿ ನಷ್ಟ ಉಂಟಾಗಲಿದೆ. ಅತಿ ಸೂಕ್ಷ್ಮ ಪರಿಸರ ವಲಯದಲ್ಲಿ ವನ್ಯ ಮೃಗಗಳಿಂದ ಆತ್ಮರಕ್ಷಣೆಗೆ ಕೋವಿ ಬಳಕೆ ಸಾಧ್ಯವಾಗುವುದಿಲ್ಲ. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕೋವಿ ಬಳಕೆ ಮತ್ತು ಕೋವಿ ಇಟ್ಟುಕೊಳ್ಳುವುದಕ್ಕೆ ತೊಂದರೆ ಬರುತ್ತದೆ. ಈ ಮೂಲಕ ನಮ್ಮ ಸಂಸ್ಕೃತಿ ಹಾಗೂ ಹಬ್ಬ ಆಚರಣೆಗೆ ತೊಂದರೆಯಾಗಲಿದೆ ಎಂದರು.

ಪುತ್ತರಿ ಹಬ್ಬದಂದು ಪಿಟಾಕಿ ಸಿಡಿಸುವುದಕ್ಕೂ ನಿರ್ಬಂಧವಿರುತ್ತದೆ. ಬೆಳೆ ನಷ್ಟ, ವನ್ಯ ಪ್ರಾಣಿಗಳಿಂದ ಬೆಳೆ ನಷ್ಟ, ಪ್ರಾಣ ಹಾನಿಯಾದರೆ ಪರಿಹಾರ ಸಹ ದೊರೆಯುವುದಿಲ್ಲ. ಕ್ರಮೇಣವಾಗಿ ಅಧಿಕಾರಿಗಳ ಕಿರುಕುಳ ಹೆಚ್ಚಾಗಿ ಆ ಭಾಗದ ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಅವರು ಮಾತನಾಡಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಈ ವ್ಯಾಪ್ತಿಯ ಜನರ ಕೃಷಿ ಚಟುವಟಿಕೆಗೆ ದೊಡ್ಡ ಸಮಸ್ಯೆ ಉಂಟಾಗಿ ಎಂದರು.

ಗ್ರಾ.ಪಂ. ಮಾಜಿ ಸದಸ್ಯ ಬೊಟ್ಟಂಗಡ ಗಿರೀಶ್ ಮಾತನಾಡಿ ಈಗಿರುವ ಸರ್ಕಾರದ ಕಾನೂನು ಕಾಯ್ದೆ ಪ್ರಕಾರ ಜಿಲ್ಲೆಯ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆಕಸ್ತೂರಿರಂಗನ್ ವರದಿ ಜಾರಿಯಾದರೆ ಈ ವ್ಯಾಪ್ತಿಗೆ ಒಳಪಡುವ ಜನರು ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಜನರಿಗೆ ಬದುಕಲು ಸಾಧ್ಯವಾಗುವುದಿಲ್ಲ. ಸರ್ಕಾರ ಕ್ರಮೇಣವಾಗಿ ಎಲ್ಲ ಜನರನ್ನು ಒಕ್ಕಲೆಬ್ಬಿಸುತ್ತದೆ, ಜನರ ಬದುಕು ಅತಂತ್ರವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಪತ್ರವನ್ನು ಬಿರುನಾಣಿ ಗ್ರಾಮ ಪಂಚಾಯಿತಿ ಪಿಡಿಓ ಪ್ರಕಾಶ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಸದ್ಯದಲ್ಲಿಯೇ ಗ್ರಾಮ ಸಭೆ ಕರೆದು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಣಾಯಕಗೊಳ್ಳಲಾಯಿತು.ಮರೆ ನಾಡು ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯoಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ, ನಿರ್ದೇಶಕರಾದ ಕಾಳಿಮಾಡ ರಶಿಕ್ ಕಾವೇರಪ್ಪ, ಕುಪ್ಪಣಮಾಡ ಪ್ರೀತಮ್ ಬಲ್ಯಮೀದೇರಿರ ರಾಜ, ಗುಡ್ಡಮಾಡ ಸುಧೀರ್, ಅಣ್ಣಳ ಮಾಡ ಸನ್ನಿ, ಕಾಳಿಮಾಡ ಗಿರೀಶ್ ಮತ್ತು ಪ್ರಮುಖರಾದ ಕರ್ತ ಮಾಡ ಸುಜು,ಪಾಕ್ಸ್ ಉಪಾಧ್ಯಕ್ಷ ಗುಡ್ಡ ಮಾಡ ಸುಬ್ರಮಣಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕೀಕಣಮಾಡ ಮನು, ಅಣ್ಣಳಮಾಡ ಗಿರೀಶ್, ಕೊಡಗು ರಕ್ಷಣಾ ವೇದಿಕೆ ಬಿರುನಾಣಿ ಅಧ್ಯಕ್ಷ ಕುಪ್ಪಣಮಾಡ ಗೌತಮ್, ಉಪಾಧ್ಯಕ್ಷ ಕಾಳಿಮಾಡ ಸಚಿನ್, ಅಣ್ಣೀರ ವಿಜು ಪೂಣಚ್ಚ, ಮೀದೇರಿರ ಸುರೇಶ್, ಚೋನಿರ ಸುಬ್ರಮಣಿ ಮುoತಾದ ಪ್ರಮುಖರು ಪಾಲ್ಗೊಂಡಿದ್ದರು.