ಸಾರಾಂಶ
ಭ್ರೂಣ ಹತ್ಯೆ, ಬಾಲ್ಯ ವಿವಾಹ ಹಾಗೂ ಇತರೆ ಅಪರಾಧಗಳು ನಡೆದರೆ ತಕ್ಷಣ ಮಾಹಿತಿ ನೀಡಿ ಸುಳಿವು ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತದೆ ಎಂದು ಡಿವೈಎಸ್ಪಿ ಶೇಖರ್ ಹೇಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಭ್ರೂಣ ಹತ್ಯೆ, ಬಾಲ್ಯ ವಿವಾಹ ಹಾಗೂ ಇತರೆ ಅಪರಾಧಗಳು ನಡೆದರೆ ತಕ್ಷಣ ಮಾಹಿತಿ ನೀಡಿ ಸುಳಿವು ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತದೆ ಎಂದು ಡಿವೈಎಸ್ಪಿ ಶೇಖರ್ ಹೇಳಿದರು.ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ತ್ರೈಮಾಸಿಕ ದಲಿತ ಕುಂದು ಕೊರೆತ ಸಭೆಯಲ್ಲಿ ಮಾತನಾಡಿದ ಅವರು, ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು. ನಿಮ್ಮ ಹತ್ತಿರದಲ್ಲಿ ಅಹಿತಕರ ಘಟನೆ ನಡೆದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು. ದಲಿತ ಮುಖಂಡರುಗಳು ಮಾತನಾಡಿ, ದಲಿತ ಕಾಲೋನಿಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿ ನಡೆಯುತ್ತಿದೆ. ಆದ್ದರಿಂದ ಕುಟುಂಬದಲ್ಲಿ ಕಲಹಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಪೊಲೀಸ್ ಇಲಾಖೆ ಗ್ರಾಮಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.
ಈ ಸಭೆಯಲ್ಲಿ ಮಹಿಳೆಯರ ನಡೆಯುವ ದೌರ್ಜನ್ಯ, ಬಾಲ್ಯವಿವಾಹ, ಭ್ರೂಣ ಹತ್ಯೆ, ಮಹಿಳಾ ಕಾನೂನು, ಗ್ರಾಮಗಳಲ್ಲಿ ಹಕ್ಕು ಪತ್ರ ಪಡೆಯುವುದು ಗುಬ್ಬಿ ಕೆರೆ ಏರಿಯ ಮೇಲೆ ಕಾಲೇಜು ವಿದ್ಯಾರ್ಥಿಗಳು ಮದ್ಯಪಾನ ಮಾಡುತ್ತಿರುವುದು ಇನ್ನೂ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಸಭೆಯಲ್ಲಿ ಆರಕ್ಷಕ ವೃತ್ತ ನೀರಿಕ್ಷಕ ರಾಘವೇಂದ್ರ, ಸಬ್ ಇನ್ಸಪೆಕ್ಟರ್ ಗಳಾದ ಸುನೀಲ್ ಕುಮಾರ್, ಶಿವಕುಮಾರ್, ನಾಗರಾಜು, ಮುಖಂಡರಾದ ಕಿಟ್ಟದಕುಪ್ಪೆ, ನಾಗರಾಜು, ಕಡಬ ಶಂಕರ್, ನಿಟ್ಟೂರು ರಂಗಸ್ವಾಮಿ, ನಾಗರಾಜು, ಸಚ್ಚಿನ್, ಮನು, ಈಶ್ವರಯ್ಯ, ಹರಿವೇಸಂದ್ರ ಲೋಕೇಶ್, ಮಹಾದೇವಣ್ಣ, ರವೀಶ್ ಮತ್ತಿತರರು ಇದ್ದರು.