ಹರಪನಹಳ್ಳಿಯಲ್ಲಿ ಖಾತ್ರಿ ಯೋಜನೆಯ ಹೆಸರು ಬದಲಿಸುವ ಮಸೂದೆ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಅಖಿಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಹರಪನಹಳ್ಳಿ: ಉದ್ಯೋಗ ಖಾತ್ರಿಯ ಹೆಸರು ಬದಲಾವಣೆಗೆ ತಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್‌ ರೋಜಗಾರ ಆ್ಯಂಡ್‌ ಅಜೀವಿಕಾ ಮಿಶನ್‌ ಮಸೂದೆ ಯನ್ನು ವಾಪಾಸ್‌ ಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ರಾಷ್ಟ್ರಪತಿಯವರನ್ನು ಒತ್ತಾಯಿಸಿ ಸಿಪಿಐ(ಎಂಎಲ್‌) ಲಿಬರೇಷನ್‌ ಹಾಗೂ ಅಖಿಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕರ ಸಂಘಗಳ ಆಶ್ರಯದಲ್ಲಿ ಕಾರ್ಮಿಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಇಲ್ಲಿಯ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಹಿರಂಗ ಸಭೆ ನಡೆಸಿ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಹಕ್ಕೊತ್ತಾಯಗಳು

ದೇಶದ ಬಡ ಹಾಗೂ ಮದ್ಯಮ ವರ್ಗದವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ವಿಕಸಿತ ಭಾರತ ಫಾರ್‌ ರೋಜಗಾರ ಆ್ಯಂಡ್ ಅಜೀವಿಕಾ ಮಿಶನ್‌ ಮಸೂದೆ (ವಿಬಿ -ಜಿ.ರಾಮ್ ಜಿ )ಯನ್ನು ಕೂಡಲೇ ವಾಪಸ್‌ ಪಡೆಯಬೇಕು.

ಸಂಘ ಪರಿವಾರದ ಮನಸ್ಥಿತಿಯಿಂದ ಬಿಜೆಪಿ ಸರ್ಕಾರ ಮಸೂದೆಯ ಹೆಸರನ್ನು ಬದಲಿಸಿದ್ದು, ಕೂಡಲೇ ಈ ನಿರ್ಧಾರ ವಾಪಾಸ್‌ ಪಡೆದು ಮೊದಲಿನ ಹೆಸರಿನಲ್ಲಿಯೇ ಯೋಜನೆ ಮುಂದುವರಿಸಬೇಕು. 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 86 ಸಾವಿರ ಕೋಟಿ ಹಣವನ್ನು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಗೆ ನಿಗದಿ ಪಡಿಸಿದ್ದು, ಮುಂಬರುವ 2026-27ನೇ ಸಾಲಿನ ಬಜೆಟ್ ನಲ್ಲಿ 2 ಲಕ್ಷ ಕೋಟಿ ಹಣವನ್ನು ಈ ಯೋಜನೆಗೆ ನಿಗದಿಪಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಹುಲ್ಲಿಕಟ್ಟಿ ಮೈಲಪ್ಪ, ಸಂದೇರ ಪರಶುರಾಮ, ಸಂತೋಷ ಗುಳೇದಹಟ್ಟಿ, ಮಹಮದ್‌ ರಫಿ, ಇಬ್ರಾಹಿಂ ಸಾಹೇಬ್, ಬಾಗಳಿ ರೇಣುಕಮ್ಮ, ಕಲೀಂ, ರಾಮಣ್ಣ, ಮಂಜು, ಜೋಗಿನ ನಾಗರಾಜ, ಮೋಹನ್ ಕುಮಾರ, ವಿನಯ, ಬಿ.ಎಸ್. ಪ್ರಕಾಶ, ಕೃಷ್ಣಕುಮಾರ, ಅಂಜಿನಿ, ಕೆ. ರಾಘವೇಂದ್ರ, ಬಾಬು, ಫಕೀರಪ್ಪ, ಅನ್ವರ ಬಾಷಾ, ಕೊಟ್ರೇಶ, ಹನುಮಂತಪ್ಪ ಇತರರು ಪಾಲ್ಗೊಂಡಿದ್ದರು.