ಸಚಿವ ರಾಜಣ್ಣ ವಿರುದ್ಧ ನಿಖಿಲ್ ಆಡಿದ ಹಿಟ್ಲರ್ ಪದ ವಾಪಸ್ ಪಡೆಯುವಂತೆ ಆಗ್ರಹ

| N/A | Published : Jun 21 2025, 12:49 AM IST / Updated: Jun 21 2025, 12:52 PM IST

Nikhil kumaraswamy
ಸಚಿವ ರಾಜಣ್ಣ ವಿರುದ್ಧ ನಿಖಿಲ್ ಆಡಿದ ಹಿಟ್ಲರ್ ಪದ ವಾಪಸ್ ಪಡೆಯುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಬಗ್ಗೆ ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಡಿದ ‘ಹಿಟ್ಲರ್’ ಮಾತಿಗೆ ಕಾಂಗ್ರೆಸ್‌ ಮುಖಂಡ ಹಾಗೂ ಪುರಸಬೆ ಮಾಜಿ ಸದಸ್ಯ ಸಿ.ರಾಜು ಅಸಮಾಧಾನ ವ್ಯಕ್ತಪಡಿಸಿದ್ದು, ಹಿಟ್ಲರ್‌ ಎಂಬ ಪದವನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

  ಮಧುಗಿರಿ :  ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಬಗ್ಗೆ ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಡಿದ ‘ಹಿಟ್ಲರ್’ ಮಾತಿಗೆ ಕಾಂಗ್ರೆಸ್‌ ಮುಖಂಡ ಹಾಗೂ ಪುರಸಬೆ ಮಾಜಿ ಸದಸ್ಯ ಸಿ.ರಾಜು ಅಸಮಾಧಾನ ವ್ಯಕ್ತಪಡಿಸಿದ್ದು, ಹಿಟ್ಲರ್‌ ಎಂಬ ಪದವನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅ‍ವರು, ಸಹಕಾರ ಸಚಿವ ಕೆ.ಎನ್‌.ರಾಜಣ್ಣನವರ ಮುತುವರ್ಜಿಯಿಂದ ರಾಜ್ಯದ ಜನರ ಚಿತ್ತ ಮಧುಗಿರಿಯತ್ತ ನೆಟ್ಟಿದೆ. ಕ್ಷೇತ್ರದ ಉದ್ದಗಲಕ್ಕೂ ಅಭಿವೃದ್ಧಿ ಕಾರ್ಯಗಳು ಜನ ಮೆಚ್ಚುಗೆ ಪಡೆದಿದ್ದು, ಮಧುಗಿರಿ ಜಿಲ್ಲಾ ಕೇಂದ್ರವಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. 

ಮುಂಬರುವ ದಿನಗಳಲ್ಲಿ ಮಧುಗಿರಿ ಪುರಸಭೆ ನಗರಸಭೆಯಾಗಲಿದೆ. ಆ ನಿಟ್ಟಿನಲ್ಲಿ ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟು ನಿಂತಿದ್ದಾರೆ. ಆದರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಿಳಿದು ಕೊಳ್ಳದ ನಿಖಿಲ್ ಕುಮಾರಸ್ವಾಮಿ ಸಚಿವರ ಆಡಳಿತದ ಕಾರ್ಯ ವೈಖರಿ ಬಗ್ಗೆ ಹಿಟ್ಲರ್ ಆಡಳಿತಕ್ಕೆ ಹೋಲಿಸಿರುವುದು ಸರಿಯಲ್ಲ, ನಿಮ್ಮ ಜೆಡಿಎಸ್‌ ಪಕ್ಷದ ಮಾಜಿ ಶಾಸಕರ ಗುಣಗಾನವನ್ನು ನಿಮ್ಮ ಪಕ್ಷದ ಕಾರ್ಯಕರ್ತರೇ ನಿಮ್ಮ ಮುಂದೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. 

ಕಳೆದ ಎರಡು ವರ್ಷಗಳಿಂದ ಕಾರ್ಯಕರ್ತರ ಕಷ್ಟ- ಸುಖ ಕೇಳದಿರುವಾಗ ಸಚಿವರ ಬಗ್ಗೆ ಸುಖಾ ಸುಮ್ಮನೇ ಇಂತಹ ಆರೋಪ ಮಾಡುತ್ತೀರಾ, ನಿಮ್ಮ ತಂದೆ ಎಚ್‌ಡಿಕೆ, ತಾತ ಎಚ್‌ಡಿಡಿ ಬಗ್ಗೆ ನಮಗೂ ಅಪಾರ ಗೌರವವಿದೆ. ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಅನಾಥರಾಗಿದ್ದು ಅವರ ಗೋಳು ಕೇಳಲು ಮಾಜಿ ಶಾಸಕರು ಇಲ್ಲವಾಗಿದ್ದಾರೆ. 

ಇಂತಹ ಪರಿಸ್ಥಿತಿಯಲ್ಲೂ ಜೆಡಿಎಸ್‌ ಕಾರ್ಯಕರ್ತರು ಎಂಎಲ್‌ಸಿ ರಾಜೇಂದ್ರ ,ಸಚಿವರ ಮುಂದೆ ಸಮಸ್ಯೆ ಹೇಳಿ ಸಹಕಾರ ಕೇಳಿದರೆ ಇಲ್ಲ ಎನ್ನದೆ ಜಾತ್ಯಾತೀತ, ಪಕ್ಷಾತೀತವಾಗಿ ಪಕ್ಷಬೇಧ ಮರೆತು ಸಹಕಾರ ನೀಡುತ್ತಿದ್ದಾರೆ. ಆದರೆ ನಿಮ್ಮ ನಾಯಕರೇ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಿದ್ದು, ನಿಮ್ಮ ತಪ್ಪು ಮುಚ್ಚಿಕೊಳ್ಳಲು ಸಚಿವ ಕೆ.ಎನ್‌.ರಾಜಣ್ಣರ ವಿರುದ್ಧ ಟೀಕಿಸುವುದು ನಿಮಗೆ ಶೋಭೆ ತರುವುದಿಲ್ಲ ಎಂದರು.

ಸಚಿವ ರಾಜಣ್ಣರವರನ್ನು ಬೈದರೆ ಮಾತ್ರ ನಿಮ್ಮ ಸಂಘಟನೆಯಾಗಲಿದೆ ಎಂಬುದು ನಿಮ್ಮ ಹಳೆಯ ಚಿಂತನೆ, ಕಾರ್ಯಕರ್ತರನ್ನು ಕಡೆಗಣಿಸಿದ್ದು ಯಾರೆಂದು ನಿಮಗೆ ಗೊತ್ತಿದೆ. ಮೊದಲು ನಿಮ್ಮ ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸಿದರೆ ಸಾಕು. ಸಚಿವರ ಕುಟುಂಬ ಯಾವುದೇ ಕಾರ್ಯಕರ್ತರಿಗೆ ಕ್ಷೇತ್ರದಲ್ಲಿ ಅನ್ಯಾಯ ಮಾಡಿಲ್ಲ, ಬೆಳಸಿದವರೆ ಬೆನ್ನಿಗೆ ಚೂರಿ ಹಾಕಿದ್ದು, ಈಗ ಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲಿದ್ದು ವೈಯಕ್ತಿಕ ತೇಜೋವಧೆ ಮಾಡಿದ್ದರೂ ಪಕ್ಷಕ್ಕೆ ಬಂದಾಕ್ಷಣ ಅವರಿಗೊಂದು ಸ್ಥಾನ ಕಲ್ಪಿಸಿ ಪಕ್ಷದಲ್ಲೇ ಕೂರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇಂತಹ ರಾಜಕಾರಣಿ ಬಗ್ಗೆ ನಿಖಿಲ್ ಅವರು ಹಗುರವಾಗಿ ಮಾತನಾಡಬಾರದು. ಯಾರೋ ಹೇಳಿದ್ದನ್ನು ನಂಬ ಬಾರದು. ನಿಮ್ಮ ತಾಯಿ ಶಾಸಕರಾಗಿದ್ದಾಗ ಕನಿಷ್ಠ ರಾಷ್ಟ್ರೀಯ ಹಬ್ಬಗಳಿಗೂ ಬಾರದೇ ದೂರ ಉಳಿದಿದ್ದರು. ನಂತರ ಬಂದವರು ಕಾರ್ಯಕರ್ತರನ್ನೇ ನಿರ್ಲಕ್ಷಿಸಿದ್ದು , ಇಲ್ಲಿಂದಲೇ ಜೆಡಿಎಸ್‌ ಅವನತಿ ಪ್ರಾರಂಭವಾಗಲಿದೆ ಎಂದು ಟೀಕಿಸಿದರು.

Read more Articles on