ಸಾರಾಂಶ
ಸಂಡೂರು: ಚುನಾವಣಾ ಪ್ರಚಾರ ಸಭೆಯಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವಂತೆ ಭಾಷಣ ಮಾಡಿರುವ ರಾಜಕಾರಣಿಗಳ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಎಂ ಮುಖಂಡರು ಹಾಗೂ ಉದ್ಯೋಗ ಖಾತ್ರಿ ಕಾರ್ಮಿಕರು ಮಂಗಳವಾರ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ರವಾನಿಸಿದ್ದಾರೆ.ಸಿಪಿಐಎಂ ಪಕ್ಷದ ಮುಖಂಡರು ಹಾಗೂ ಕಾರ್ಮಿಕರು ತೋರಣಗಲ್ಲು ಬಳಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ತಮ್ಮ ಮನವಿಯನ್ನು ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ರೇಣುಕಾಚಾರ್ಯಗೆ ಸಲ್ಲಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಮಹಿಳೆಯರ ಘನತೆಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ.ಸಂಜಯ್ ಪಾಟೀಲ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘನತೆಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಗಳಲ್ಲಿ ಮಹಿಳಾ ಮತದಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ರಾಜಕೀಯ ನಾಯಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅವರನ್ನು ಚುನಾವಣಾ ಕಣದಿಂದ ವಜಾಗೊಳಿಸಬೇಕು ಎಂದು ಕಾರ್ಮಿಕರು ಹಾಗೂ ಸಿಪಿಎಂ ಪಕ್ಷದ ಮುಖಂಡರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸಿಪಿಎಂ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ಎ.ಸ್ವಾಮಿ, ನಾಗಭೂಷಣ, ಲೋಕೇಶ, ರೇಣುಕಮ್ಮ, ಫಾತಿಮಾ, ಮುನ್ನಿಸಾ, ಜಯಮ್ಮ, ಶಾಂತಮ್ಮ, ಯಮನಮ್ಮ, ಮಸ್ತಾನಬೀ, ಪೂಜಾ, ಭಾಗ್ಯಮ್ಮ, ಗಂಗಮ್ಮ, ಅಂಜಿನಯ್ಯ ಮುಂತಾದವರು ಉಪಸ್ಥಿತರಿದ್ದರು.