ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯ

| Published : Jun 10 2025, 08:20 AM IST

ಸಾರಾಂಶ

ವಿವಿಧ ಜನಪರ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಗದಗ: ವಿವಿಧ ಜನಪರ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಎಸ್.ಹ್ಯಾಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮುಚ್ಚುತ್ತಿರುವುದು ಶೋಚನೀಯ ಸಂಗತಿ. ಗ್ರಾಮೀಣ ಭಾಗದ ಬಡರೈತ, ಶೋಷಿತ ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಗಳು ತುಂಬಾ ಅನುಕೂಲವಾಗಿದ್ದು, ಆದರೆ 2024-25ರಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳ ಪರವಾನಗಿ ವ್ಯಾಪಾರೀಕರಣ ನಡೆದಿದೆ. ರಾಜ್ಯದಲ್ಲಿ 475ಕ್ಕೂ ಹೆಚ್ಚು ಹೊಸ ಶಾಲೆಗಳಿಗೆ ಪರವಾನಗಿ ಕೊಡಲಾಗಿದೆ. ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 125ಕ್ಕೂ ಅಧಿಕ ಶಾಲೆಗಳಿಗೆ ಪರವಾನಗಿಯನ್ನು ಶಿಕ್ಷಣ ಇಲಾಖೆ ನೀಡಿದೆ. ನೂತನ ಶಾಲೆಗಳಿಗೆ ಪರವಾನಗಿ ನೀಡಬೇಕಾದ ಅದರದ್ದೆ ಆದ ನಿಯಮಾನುಸಾರಗಳಿಗೆ ಅದನ್ನು ಮೀರಿ ಬೇಕಾಬಿಟ್ಟಿಯಾಗಿ ವ್ಯಾಪಾರೀಕರಣ ನಡೆಸಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದು ನೋವಿನ ಸಂಗತಿ ಆಗಿದೆ. ಈ ರೀತಿ ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವಂತಾಗಿದೆ. ಇದರ ವಿರುದ್ಧ ಹಲವಾರು ಬಾರಿ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರವೇ ಮುಚ್ಚುತ್ತಿದ್ದರೆ ಕನ್ನಡ ಭಾಷೆ ಉಳಿಯುವುದು ಹೇಗೆ? ಬಡವರಿಗೆ, ಶೋಷಿತರಿಗೆ, ಸರ್ಕಾರಿ ಶಾಲೆಗಳು ಶಿಕ್ಷಣ ನೀಡುತ್ತಿವೆ. ಬರುವ ದಿನಗಳಲ್ಲಿ ಬಡವರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಅದೇ ರೀತಿ ಔಷಧ ಮಳಿಗೆಗಳಲ್ಲಿ ಸಂಬಂಧಿಸಿದ ವಿದ್ಯೆಯ ಪ್ರಮಾಣ ಪತ್ರ ಇಲ್ಲದವರು ಅನಧಿಕೃತ ಔಷಧ ಮಾತ್ರೆಗಳನ್ನು ಸಾರ್ವಜನಿಕರಿಗೆ ಕೊಡುವುದನ್ನು, ದಿನಸಿ ವಸ್ತುಗಳ ಬೆಲೆ ಏರಿಕೆ, ಕಾವೇರಿ, ತುಂಗಭದ್ರಾ, ಕೃಷ್ಣ, ಮಹದಾಯಿ, ಭೀಮಾ ನದಿಯ ನೀರು ಕರ್ನಾಟಕ ರಾಜ್ಯದ ರೈತರಿಗೆ ಮೀಸಲಿರಿಸಿರುವ ಕುರಿತು ಶಾಶ್ವತ ಪರಿಹಾರ ನೀಡಬೇಕು. ನಕಲಿ ದಿನಸಿ ವಸ್ತುಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಅವುಗಳನ್ನು ತಡೆಗಟ್ಟಬೇಕೆಂದು ಮನವಿ ಸಲ್ಲಿಸಿದರು. ಈ ವೇಳೆ ಕಾರ್ಯಕರ್ತರಾದ ಅಶೋಕ ಶಿರಹಟ್ಟಿ, ತಿಪ್ಪಣ್ಣ ಕಟ್ಟಿಮನಿ, ಮಹಾಂತೇಶ ವಡ್ಡರ, ರಂಗಪ್ಪ, ದೇವರಾಜ ವಡ್ಡರ, ಶಿವರಾಜ ಕೊರವರ, ಮುತ್ತು, ಈರಣ್ಣ ಹಡಪದ, ತಾಯಪ್ಪ ಹರ್ಲಾಪೂರ, ಕೃಷ್ಣ ಗವಿಯಪ್ಪನವರ ಉಪಸ್ಥಿತರಿದ್ದರು.