ಸಾರಾಂಶ
ರಾಜ್ಯದಲ್ಲಿ ಡೆಂಘೀ ಹಾವಳಿ ಮಿತಿ ಮೀರಿದ್ದು ರಾಜ್ಯಾದ್ಯಂತ ಹಲವಾರು ಮಕ್ಕಳು, ದೊಡ್ಡವರು ಇದಕ್ಕೆ ಬಲಿಯಾಗಿದ್ದಾರೆ. ಸೊಳ್ಳೆಗಳ ಹಾವಳಿಯಿಂದ ರೋಗ ಹರಡುವುದರಿಂದ ಅವುಗಳ ನಿಯಂತ್ರಣಕ್ಕೆ ತಾಲೂಕಿನ ವೈಟಿಹೊನ್ನತ್ತಿ ಅಂಗನವಾಡಿ ಕೇಂದ್ರದವರು ಉಪಾಯವೊಂದನ್ನು ಕಂಡುಕೊಂಡಿದ್ದು, ಸಿಡಿಪಿಒ ಅವರು ಅಂಗನವಾಡಿ ಮಕ್ಕಳಿಗೆ ಸೊಳ್ಳೆಪರದೆಗಳನ್ನು ನೀಡಿ, ಮಕ್ಕಳು ಸೊಳ್ಳೆ ಪರದೆಯಲ್ಲಿ ಪಾಠ ಕಲಿಯುವಂತೆ ಮಾಡಿದ್ದಾರೆ.
ರಾಣಿಬೆನ್ನೂರು: ರಾಜ್ಯದಲ್ಲಿ ಡೆಂಘೀ ಹಾವಳಿ ಮಿತಿ ಮೀರಿದ್ದು ರಾಜ್ಯಾದ್ಯಂತ ಹಲವಾರು ಮಕ್ಕಳು, ದೊಡ್ಡವರು ಇದಕ್ಕೆ ಬಲಿಯಾಗಿದ್ದಾರೆ. ಸೊಳ್ಳೆಗಳ ಹಾವಳಿಯಿಂದ ರೋಗ ಹರಡುವುದರಿಂದ ಅವುಗಳ ನಿಯಂತ್ರಣಕ್ಕೆ ತಾಲೂಕಿನ ವೈಟಿಹೊನ್ನತ್ತಿ ಅಂಗನವಾಡಿ ಕೇಂದ್ರದವರು ಉಪಾಯವೊಂದನ್ನು ಕಂಡುಕೊಂಡಿದ್ದು, ಸಿಡಿಪಿಒ ಅವರು ಅಂಗನವಾಡಿ ಮಕ್ಕಳಿಗೆ ಸೊಳ್ಳೆಪರದೆಗಳನ್ನು ನೀಡಿ, ಮಕ್ಕಳು ಸೊಳ್ಳೆ ಪರದೆಯಲ್ಲಿ ಪಾಠ ಕಲಿಯುವಂತೆ ಮಾಡಿದ್ದಾರೆ.
ಈ ಅಂಗನವಾಡಿ ಕೇಂದ್ರದ ಸುತ್ತಲೂ ಸೊಳ್ಳೆ ಕಾಟ ವಿಪರೀತವಾಗಿದೆ. ಹಲವಾರು ಬಾರಿ ಗ್ರಾಮ ಪಂಚಾಯಿತಿಯಿಂದ ಫಾಗಿಂಗ್ ಮಾಡುವಂತೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅಂಗನವಾಡಿ ಶಿಕ್ಷಕರು, ಪಾಲಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆದರೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಬೇಸತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಈ ಅಂಗನವಾಡಿ ಮಕ್ಕಳು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಿರಲಿ ಎಂದು ಸೊಳ್ಳೆ ಪರದೆಯನ್ನು ನೀಡಿದ್ದಾರೆ. ಒಟ್ಟು 22 ಮಕ್ಕಳು ಅಂಗನವಾಡಿಯಲ್ಲಿದ್ದು, 2 ಸೊಳ್ಳೆ ಫರದೆ ನೀಡಿದ್ದು, ಮಕ್ಕಳು ಅದರಲ್ಲಿಯೇ ಕುಳಿತು ಪಾಠ ಆಲಿಸುತ್ತಿದ್ದಾರೆ.ಈ ಕುರಿತು ಗ್ರಾಪಂ ಪಿಡಿಒ ಟಿ.ಬಿ.ಮೂಗಾನವರ ಅವರನ್ನು ವಿಚಾರಿಸಿದಾಗ ಈಗಾಗಲೇ ಒಂದು ಸಲ ಗ್ರಾಮದಲ್ಲಿ ಫಾಗಿಂಗ್ ಮಾಡಿಸಲಾಗಿದೆ. ಇನ್ನೊಂದು ಸಲ ಫಾಗಿಂಗ್ ಮಾಡಿಸುತ್ತೇವೆ ಎಂದರು.