ಸಾರಾಂಶ
ನರಸಿಂಹರಾಜಪುರ, ಡೆಂಘೀ ವೈರಸ್ ನಿಂದ ಬರುವ ಕಾಯಿಲೆಯಾಗಿದ್ದು ಈ ರೋಗಕ್ಕೆ ಮೂಳೆ ಮುರಿತ ಕಾಯಿಲೆ ಎಂದೂ ಸಹ ಕರೆಯುತ್ತಾರೆ ಎಂದು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಡೆಂಘೀ ಜಾಗೃತಿ ಅಭಿಯಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡೆಂಘೀ ವೈರಸ್ ನಿಂದ ಬರುವ ಕಾಯಿಲೆಯಾಗಿದ್ದು ಈ ರೋಗಕ್ಕೆ ಮೂಳೆ ಮುರಿತ ಕಾಯಿಲೆ ಎಂದೂ ಸಹ ಕರೆಯುತ್ತಾರೆ ಎಂದು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ತಿಳಿಸಿದರು.
ಶುಕ್ರವಾರ ಪಟ್ಟಣದ ಬಸ್ತಿಮಠದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಡೆಂಘೀ ಜಾಗೃತಿ ಅಭಿಯಾನದಲ್ಲಿ ಮಾನ್ಸೂನ್ ಪ್ರಾರಂಭದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರಾತ್ಯಕ್ಷಿಕೆ ಯೊಂದಿಗೆ ಮಾಹಿತಿ ನೀಡಿದರು. ಡೆಂಘೀ ಕಾಯಿಲೆ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಕಾಯಿಲೆಯಲ್ಲಿ ಡೆಂಘೀ ಜ್ವರ, ಡೆಂಘೀ ರಕ್ತ ಸ್ರಾವ ಜ್ವರ ಹಾಗೂ ಡೆಂಘೀ ಶಾಕ್ ಸಿಂಡ್ರೋಮ್ ಎಂದು 3 ವಿಧಗಳನ್ನು ಗುರುತಿಸಲಾಗಿದೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ ವಿಪರೀತ ತಲೆ ನೋವು, ಜ್ವರ, ಕೈಕಾಲು ಗಂಟುಗಳಲ್ಲಿ ನೋವು ಕಂಡು ಬರುವುದು, ವಾಂತಿ, ವಾಕರಿಕೆ, ಸುತ್ತು ಕಾಣಿಸಿಕೊಳ್ಳುತ್ತದೆ.ಈ ಕಾಯಿಲೆ ನಿರ್ಲಕ್ಷ್ಯ ಮಾಡಿದರೆ ಮರಣ ಸಂಭವಿಸುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದರು.ಮುನ್ನೆಚ್ಚರಿಕೆ ಕ್ರಮವಾಗಿ ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯಲ್ಲಿ ಸಂಗ್ರಹಿಸಿರುವ ನೀರನ್ನು ಸರಿಯಾಗಿ ಮುಚ್ಚಿಟ್ಟು ಬಳಸಬೇಕು. ಅಲ್ಲದೆ ಆ ಪಾತ್ರೆಯನ್ನುವಾರಕ್ಕೊಮ್ಮೆ ತೊಳೆದು, ಶುಚಿಗೊಳಿಸಿ, ಒಣಗಿಸಿ ಬಳಸಬೇಕು. ಪ್ರತಿಯೊಬ್ಬರೂ ಮೈ ತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ನಂತರ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಪ್ರದರ್ಶಿಸಲಾಯಿತು.ಸಭೆಯಲ್ಲಿ ಜ್ವಾಲಾಮಾಲಿನಿ ಬಾಲಿಕ ಪ್ರೌಢ ಶಾಲೆ ಮುಖ್ಯೋಧ್ಯಾಯಿನಿ ಸುಜಾತಾ, ಸಹ ಶಿಕ್ಷಕ ಗುಣಪಾಲ್ ಜೈನ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ, ಸುಪ್ರೀತಾ, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್ ಕರ್, ಆಪ್ತ ಸಮಾಲೋಚಕ ಸುಹಾಸ್, ಆಶಾ ಕಾರ್ಯಕರ್ತೆ ಅನಿತಾ ಇದ್ದರು.