ಸಾರಾಂಶ
ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಹೊನ್ನಾವರ ಪತ್ರಕರ್ತರ ಬಗ್ಗೆ ವ್ಯಕ್ತಿಯೊರ್ವ ಅವಹೇಳನಕಾರಿ ಪೋಸ್ಟ್ ಮಾಡಿರುವ ಕುರಿತು ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ತಾಲೂಕಿನ ಮಣ್ಣಿಗೆಯಲ್ಲಿ ಭಗವಾನ ಶ್ರೀಸದ್ಗುರು ಶ್ರೀಧರ ಸ್ವಾಮಿಗಳ ವರದಪುರದ ವರದಯೋಗಿ ನಾಟಕಕ್ಕೆ ಪತ್ರಕರ್ತರಿಗೆ ಸಂಘಟಕರು ಆಮಂತ್ರಣ ನೀಡಿರಲಿಲ್ಲ. ಅಷ್ಟೆ ಅಲ್ಲದೇ ಕಾರ್ಯಕ್ರಮದ ವರದಿ ಮಾಡಲು ಫೋಟೋ ಮತ್ತು ವರದಿ ನೀಡಿರಲಿಲ್ಲ.
ಆದರೆ, ಫೇಸ್ಬುಕ್ನಲ್ಲಿ ಸಂತೋಷ ಯಾಜಿ ಮಣ್ಣಿಗೆ ಎನ್ನುವ ಖಾತೆಯಿಂದ ಸಂದೇಶ ಹಾಕಿದ್ದಾರೆ. ಈ ಸಂದೇಶಕ್ಕೆ ನಾಗರಾಜ ಹೆಗಡೆ ಕೊಡಾಣಿ, ಶ್ರೀಲಕ್ಷ್ಮಿ ಯಾಜಿ, ನಿನಾದ ರಾಮಣ್ಣ ಸಹ ಪತ್ರಕರ್ತರಿಗೆ ಅವಮಾನಕಾರವಾಗುವ ರೀತಿಯಲ್ಲಿ ಬೆಂಬಲ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ರೀತಿಯ ಅಪಾದನೆ ಪ್ರಥಮವಾಗಿ ಕೇಳಿ ಬಂದಿದ್ದು ಸೂಕ್ತ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ದಿನಕರ ಶೆಟ್ಟಿ ಸಂಪರ್ಕಿಸಿ ಮಾಹಿತಿ ನೀಡಿದ್ದು, ಕ್ರಮಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.
ತಹಸೀಲ್ದಾರ್ ರವಿರಾಜ್ ದಿಕ್ಷೀತ್, ವೃತ್ತ ನಿರೀಕ್ಷಕರಾದ ಸಂತೋಷ ಕಾಯ್ಕಿಣಿ ಮನವಿ ಸ್ವೀಕರಿಸಿದರು. ಪಿಎಸೈ ಮಹಾಂತೇಶ ನಾಯಕ, ತಾಲೂಕಿನ ವಿವಿಧ ಪತ್ರಕರ್ತರು ಹಾಜರಿದ್ದರು.