ಕನ್ನಡಪ್ರಭ ವಾರ್ತೆ ಹಳಿಯಾಳ
ರಾಜ್ಯದಲ್ಲಿ ಆರಂಭಗೊಂಡಿರುವ ಜನಗಣತಿ ಕಾರ್ಯದ ಅಂಗವಾಗಿ ಭಾನುವಾರ ಪಟ್ಟಣದ ಜನಗಣತಿ ವಿಭಾಗದ ಅಧಿಕಾರಿಗಳ ಹಾಗೂ ಸಿಬ್ಬಂದಿ ನಿಯೋಗವು ಶಾಸಕ ಆರ್.ವಿ. ದೇಶಪಂಡೆಯವರ ನಿವಾಸಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆಹಾಕಿತು.ಈ ಸಂದರ್ಭ ಶಾಸಕರು ತಾವು ಆನ್ ಲೈನ ಮೂಲಕ ಸ್ವಯಂ-ಗಣತಿ ಮಾಡಿರುವ ಕುರಿತು ಗಣತಿದಾರರಿಗೆ ತಿಳಿಸಿ, ಐಡಿ ತೋರಿಸಿದರು. ಗಣತಿದಾರರು ಮನೆ ಮ್ಯಾಪಿಂಗ್ ಕ್ರಿಯೆ ಪೂರ್ಣಗೊಳಿಸಿದ ನಂತರ 33 ಪ್ರಶ್ನೆಗಳ ಮಾಹಿತಿ ಸಂಗ್ರಹಿಸಿದರು.ಗಣತಿದಾರರಾದ ಗೀತಾ ಎನ್.ಜಿ., ಗಣತಿ ಮೇಲ್ವಿಚಾರಕಿ ಗುಲಾಬಿ ಕೊರ್ವೆಕರ್, ಗಣತಿ ತರಬೇತಿದಾರರಾದ ಕಿರಣಕುಮಾರ ಹಾಗೂ ಮೇಲಿನಕೆರಿ, ಹಳಿಯಾಳ ಪಟ್ಟಣದ ಜನಗಣತಿ ಚಾರ್ಜ ಅಧಿಕಾರಿಗಳಾಗಿರುವ ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಹಳಿಯಾಳ ಪಟ್ಟಣ ಗಣತಿ ವಿಷಯ ನಿರ್ವಾಹಕ ರಾಮಚಂದ್ರ ಮೋಹಿತೆ ಹಾಗೂ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಬಾವಿಕೇರಿ ಹಾಗೂ ಇತರರು ಇದ್ದರು. ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಂಯಮದಿಂದ ಶಾಂತವಾಗಿ ಮಾಹಿತಿ ನೀಡಿದ ಶಾಸಕರು, ಗಣತಿ ಸಮಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಗಣತಿದಾರರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ದೇಶದ ಅಭಿವೃದ್ಧಿಗೆ ಗಣತಿ ಕಾರ್ಯವು ಅತೀ ಅವಶ್ಯಕವಾಗಿದ್ದು, ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಕಡ್ಡಾಯವಾಗಿ ಸಮಗ್ರ ಹಾಗೂ ನಿಖರವಾದ ಮಾಹಿತಿಯನ್ನು ಒದಗಿಸಿ ಸಹಕರಿಸಬೇಕು ಎಂದು ದೇಶಪಾಂಡೆ ಮನವಿ ಮಾಡಿದರು.