ಸಾರಾಂಶ
ಪುರಸಭೆ ಮತ್ತು ಪಿಡಿಒಗಳ ಸಭೆ ಅಧ್ಯಕ್ಷತೆ
ಕನ್ನಡಪ್ರಭ ವಾರ್ತೆ, ಕಡೂರುಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲೂ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಅಸಮಾಧಾನ ವ್ಯಕ್ತಪಡಿಸಿದರು.
ಕಡೂರಿನ ತಾಪಂ ಸಭಾಂಗಣದಲ್ಲಿ ಡೆಂಘೀ ಕುರಿತು ಆರೋಗ್ಯ ಇಲಾಖೆ, ಪುರಸಭೆ ಮತ್ತು ಪಿಡಿಒಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದಲ್ಲಿ ಕಸ ವಿಲೇವಾರಿಗೆ ಇಂದಿನಿಂದಲೇ ಪೂರ್ಣ ಗಮನ ಕೊಡಬೇಕು. ಎಲ್ಲಿಯೂ ಕಸ ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ಪಟ್ಟಣ ಮಾಡುವುದು ನಿಮ್ಮ ಜವಾಬ್ದಾರಿ. ಕೂಡಲೆ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು, ನಾಶಪಡಿಸಬೇಕು. ಪ್ರತೀ ಗ್ರಾಮದಲ್ಲೂ ಫಾಗಿಂಗ್ ಮಾಡಿಸಲು ಅನುಕೂಲವಾಗುವಂತೆ ಪಿಡಿಒಗಳು ಪಂಚಾಯಿತಿ ಅನುದಾನದಲ್ಲಿ ಫಾಗಿಂಗ್ ಮೆಷಿನ್ ಗಳನ್ನು ಖರೀದಿಸಬೇಕು. ಇಒ ಇದರತ್ತ ತುರ್ತು ಗಮನ ಹರಿಸಬೇಕು ಎಂದು ಸೂಚಿಸಿದರು.ಇಓ ಪ್ರವೀಣ್ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಈಡಿಸ್ ಈಡಿಪಸ್ ಸೊಳ್ಳೆ ನಿಯಂತ್ರಣಕ್ಕೆ ಒಂದು ತಿಂಗಳಿಂದ ಗ್ರಾಮಗಳ ಚರಂಡಿಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲಾಗಿದೆ. ತ್ಯಾಜ್ಯ ತೆರವು ಮಾಡಲಾಗುತ್ತಿದೆ. ಲಾರ್ವಾ ಸಮೀಕ್ಷೆ ಕೈ ಗೊಳ್ಳ ಲಾಗಿದೆ. ಫಾಗಿಂಗ್ ಮೆಷಿನ್ ಖರೀದಿಸಲು ಪಂಚಾಯಿತಿಗಳಿಗೆ ಆದೇಶ ಪತ್ರ ಕಳಿಸಲಾಗುತ್ತದೆ. ವಿಳಂಬ ಮಾಡದೆ ಫಾಗಿಂಗ್ ಮೆಷಿನ್ ಖರೀದಿಸಿ ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ,1128 ಶಂಕಿತ ಡೆಂಘೀ ಪ್ರಕರಣಗಳ ಪೈಕಿ 262 ಜನರ ರಕ್ತ ಪರೀಕ್ಷೆಯಲ್ಲಿ 4೦ ಪ್ರಕರಣಗಳು ಧೃಢಪಟ್ಟಿವೆ. ಖಾಸಗಿ ಆಸ್ಪತ್ರೆಗಳಲ್ಲಿ 381ಶಂಕಿತ ಪ್ರಕರಣಗಳಲ್ಲಿ 18 ಧೃಢಪಟ್ಟಿವೆ. ಯಾರಿಗೇ ಜ್ವರ ಕಾಣಿಸಿಕೊಂಡರೂ ಕಡ್ಡಾಯವಾಗಿ ಡೆಂಘೀ ಮತ್ತು ಮಲೇರಿಯಾ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ಮನೆಗೂ ಭೇಟಿ ನೀಡಿ ಡೆಂಘೀ ಬಗ್ಗೆ ಅರಿವು ಮೂಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಪಿಡಿಒಗಳು ಆರೋಗ್ಯ ಇಲಾಖೆ ಜೊತೆ ಸಹಕರಿಸಬೇಕು ಎಂದು ಕೋರಿದರು.ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಉಮೇಶ್ ಮಾತನಾಡಿ, ಜೂನ್ ತಿಂಗಳಿನಲ್ಲಿ 32 ಡೆಂಘೀ ಜ್ವರ ಪ್ರಕರಣ ಪತ್ತೆಯಾಗಿದ್ದವು. ಜುಲೈ ತಿಂಗಳಲ್ಲಿ 27 ಡೆಂಘೀ ಪ್ರಕರಣಗಳು ಧೃಢಪಟ್ಟಿದೆ. ಒಟ್ಟು 702 ಡೆಂಘೀ ಪರೀಕ್ಷೆಗಳಲ್ಲಿ 76 ಧೃಢಪಟ್ಟಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಪಿಡಿಒಗಳು, ಪುರಸಭೆ ಆರೋಗ್ಯ ಸಿಬ್ಬಂದಿ ಇದ್ದರು. 10ಕೆಕೆಡಿಯು2.ಕಡೂರಿನ ತಾಪಂ ಸಭಾಂಗಣದಲ್ಲಿ ಡೆಂಘೀ ಕುರಿತು ಆರೋಗ್ಯ ಇಲಾಖೆ, ಪುರಸಭೆ ಮತ್ತು ಪಿಡಿಒ ಗಳ ಸಭೆ ನಡೆಯಿತು.