ಸಾರಾಂಶ
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿವಿದ್ಯಾರ್ಥಿಗಳಿಗೆ ಡೆಂಗ್ಯೂ ಜಾಗೃತಿ ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸೊಳ್ಳೆ ಚಿಕ್ಕದಾದರೂ ಸಾವು ತರುವ ಸಾಧ್ಯತೆ ಇದೆ. ಸೊಳ್ಳೆಯಿಂದ ಹರಡುವ ರೋಗಗಳಿಗೆ ಕಡಿವಾಣ ಹಾಕಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಹೇಳಿದರು.ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಮತ್ತು ಲಾರ್ವಮುಕ್ತ ಸೊಳ್ಳೆಮುಕ್ತ ಶಾಲಾ ಕಾಲೇಜು ಘೋಷಣೆ ಮಾಡಲು ಸರ್ವರು ಶ್ರಮಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಇದ್ದಕ್ಕಿದ್ದಂತೆ ಜ್ವರ ಬರುವುದು, ಕಣ್ಣಿನ ಹಿಂಭಾಗ ನೋವು, ಕೀಲು ಮಾಂಸಖಂಡಗಳ ನೋವು, ಹಲವರಿಗೆ ಹೊಟ್ಟೆ ನೋವು ಬರಬಹುದು, ಇವು ಡೆಂಗ್ಯೂ ಜ್ವರದ ಲಕ್ಷಣಗಳು. ಡೆಂಗ್ಯೂ ಜ್ವರ ಬಂದರೆ ನಿಗದಿತವಾದ ಚಿಕಿತ್ಸೆ ಲಭ್ಯವಿಲ್ಲ. ರೋಗಲಕ್ಷಣಗಳಿಗನುಸಾರವಾಗಿ ವೈದ್ಯರು ಚಿಕಿತ್ಸೆಯನ್ನು ನೀಡುತ್ತಾರೆ ಎಂದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ ಮಾತನಾಡಿ, ಸೊಳ್ಳೆ ನಿಯಂತ್ರಣಕ್ಕೆ ಮನೆ ಮುಂದೆ ಬೇವಿನ ಹೊಗೆ ಹಾಕಿರಿ, ನಿರುಪಯುಕ್ತ ವಸ್ತುಗಳನ್ನು ದೂರವಿಲೇವಾರಿ ಮಾಡಿ ,ಮನೆಯಲ್ಲಿನ ನೀರಿನ ತಾಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಮನೆಯ ಮುಂದೆ ಚೆಂಡು ಹೂವು, ಸೇವಂತಿಗೆ ಬೆಳೆಸಿ ಸೊಳ್ಳೆಗಳನ್ನು ನಿಯಂತ್ರಿಸಿ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ ಮಾತನಾಡಿ, ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಗಂಬ್ಯೂಸಿಯ ಮೀನುಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಯವರು ಆಯ್ದ ನೀರಿನ ತಾಣಗಳಿಗೆ ಬಿಡಲಾಗುತ್ತಿದ್ದು, ಈ ಮೀನುಗಳು ಸೊಳ್ಳೆ ಮರಿಗಳನ್ನು ತಿನ್ನುತ್ತವೆ. ಸೊಳ್ಳೆ ಬ್ಯಾಟ್ ಬಳಕೆ ಮಾಡುವುದರಿಂದ ಸೊಳ್ಳೆ ನಿಯಂತ್ರಣವೂ ಕೂಡ ಸಾಧ್ಯ ಎಂದರು. ಈ ವೇಳೆ ವಿದ್ಯಾರ್ಥಿಗಳಿಗೆ ಗಪ್ಪಿ ಗಂಬೂಸಿಯಾ ಮೀನುಗಳು ಮತ್ತು ಲಾರ್ವ ಪ್ರದರ್ಶನ ಮಾಡಲಾಯಿತು. ಪ್ರಾಂಶುಪಾಲ ಸಣ್ಣ ಪಾಲಯ್ಯ ಮತ್ತು ಉಪನ್ಯಾಸಕ ವೃಂದದವರು ಇದ್ದರು.