ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಣ
ಸಾವಿರಾರು ಸಂಖ್ಯೆಯಲ್ಲಿ ದೇವನಹಳ್ಳಿ ಚಲೋ ಮೂಲಕ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದೆಂಬ ಎಚ್ಚರಿಕೆ ಸರ್ಕಾರಕ್ಕೆ ಕೊಡಲಾಗಿದೆ ಎಂದು ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಬೀರಸಂದ್ರ ಬಳಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಕೃಷಿ ಭೂಮಿಯ ಭೂಸ್ವಾಧೀನವನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಭೂಸ್ವಾಧೀನ ಪ್ರಯತ್ನವನ್ನು ರದ್ದುಪಡಿಸಬೇಕು. ಹೋರಾಟ ಮಾಡುತ್ತಿರುವ ರೈತರ ಮೇಲೆ ದೌರ್ಜನ್ಯ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.1180 ದಿನಗಳಿಂದ ಚನ್ನರಾಯಪಟ್ಟಣ ನಾಡಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರಿಗೆ ಸರ್ಕಾರ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಮೊನ್ನೆಯಷ್ಟೇ ದೇವನಹಳ್ಳಿ ಚಲೋ ಸಂಯುಕ್ತ ಹೋರಾಟ-ಕರ್ನಾಟಕ, ಸಮಾನ ಮನಸ್ಥ ಜನಪರ ಸಂಘಟನೆಗಳು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ರಾಜ್ಯಕ್ಕೆ ಹೊಸ ಸಂದೇಶವನ್ನು ನೀಡಿ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಾರದೆಂಬ ಎಚ್ಚರಿಕೆಯನ್ನು ಈ ಸರ್ಕಾರಕ್ಕೆ ಕೊಟ್ಟಿದ್ದೇವೆ.
ಅದನ್ನು ಸಹಿಸದ ಸರ್ಕಾರ ರೌಡಿಗಳ ರೀತಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಬಂಧಿಸುವುದರ ಮೂಲಕ ಅನಾಗರಿಕವಾಗಿ ವರ್ತಿಸಿದ್ದಾರೆ. ಆ ಕಾರಣಕ್ಕಾಗಿ ಡಿಸಿಪಿ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಚನ್ನರಾಯಪಟ್ಟಣದ ಫಲವತ್ತಾದ ಭೂಮಿಯನ್ನು ಕೈಬಿಡಬೇಕೆಂದು ಹೋರಾಟದ ನಮ್ಮ ಒತ್ತಾಯ ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಚನ್ನರಾಯಪಟ್ಟಣ ಹೋಬಳಿ ರೈತರು ಜಿಲ್ಲಾಧಿಕಾರಿ ಬಸವರಾಜು.ಬಿ.ಎ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಹಿರಿಯ ರೈತ ಮುಖಂಡ ಜಿ.ನಂಜಪ್ಪ ಮಾತನಾಡಿದರು. ಈ ವೇಳೆ ರೈತ ಮುಖಂಡರಾದ ಪಿಳ್ಳಪ್ಪ, ಮುನಿಕೃಷ್ಣಪ್ಪ, ಪಿ.ನಂಜೇಗೌಡ, ಶಿವಕುಮಾರ್, ರಮೇಶ್, ಕೃಷ್ಣಪ್ಪ.ಎನ್.ಡಿ, ರಾಜೇಶ್, ನಾಗರಾಜ್.ಕೆ.ಎನ್., ಅಂಬರೀಶ್.ಎಂ. ಚನ್ನರಾಯಪಟ್ಟಣ ಹೋಬಳಿ ರೈತ ಮುಖಂಡರು ಇದ್ದರು.