ಸಾರಾಂಶ
ಕೊಡವರ ಹತ್ಯೆಯಾದ ದೇವಟ್ ಪರಂಬು ಸ್ಮಾರಕ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿತು. ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಕೊಡವಲ್ಯಾಂಡ್ ಪರ ಹಕ್ಕೊತ್ತಾಯ ಮಂಡಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವರ ಹತ್ಯೆಯಾದ ದೇವಟ್ ಪರಂಬು ಸ್ಮಾರಕ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿತು.ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಕೊಡವಲ್ಯಾಂಡ್ ಪರ ಹಕ್ಕೊತ್ತಾಯ ಮಂಡಿಸಿದರು.
ಕೆಳದಿ/ಪಾಲೇರಿ ರಾಜ ಪರಿವಾರದ ಅಧೀನದಲ್ಲಿದ್ದ ಕೊಡಗು ರಾಜ್ಯವನ್ನು ಪರಾಕ್ರಮಿ ಕೊಡವರು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದಿಂದ 32ಕ್ಕೂ ಹೆಚ್ಚು ಬಾರಿ ಕಾಪಾಡಿದರು. ಈ ಸೋಲಿನ ಸೇಡು ತೀರಿಸಿಕೊಳ್ಳಲು, ಟಿಪ್ಪು ಕೊಡವ ಬುಡಕಟ್ಟು ಜನಾಂಗವನ್ನು ವಂಚನೆಯ ಮೂಲಕ ಸಂಪೂರ್ಣ ನಾಶಮಾಡಲು ಸಂಚು ಹೂಡಿದ. ಟಿಪ್ಪು ಸಂಚಿನಿಂದ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಸ್ಮರಣಾರ್ಥ ಅಂತಾರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಬೇಕು ಮತ್ತು ಕೊಡವರ ನರಮೇಧವನ್ನು ವಿಶ್ವಸಂಸ್ಥೆ ಯುಎನ್ಒ ಅಂತಾರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಆದಿಮ ಸಂಜಾತ ಕೊಡವ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಎಸ್ಟಿ ಟ್ಯಾಗ್ ಕಲ್ಪಿಸಬೇಕು, ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಖಾತ್ರಿ ಒದಗಿಸಬೇಕು, ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ ಸಂಸ್ಕಾರ ಗನ್ ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು ಎಂಬ ಒತ್ತಾಯ ಮುಂದಿಟ್ಟುಕೊಂಡು ಕಳೆದ ಅನೇಕ ವರ್ಷಗಳಿಂದ ಸಿಎನ್ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಈ ಬೇಡಿಕೆಗಳು ಶೀಘ್ರ ಈಡೇರಲಿ ಎಂದು ಹಿರಿಯರಲ್ಲಿ ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದರು.
ಪಟ್ಟಮಾಡ ಕುಶ ಹಾಗೂ ಮಂದಪಂಡ ಮನೋಜ್ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.