ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳು ಪರಿಶುದ್ದ ಹಾಲು ಶೇಖರಣೆ ಮಾಡುವ ಮೂಲಕ ಡೇರಿ ಹಾಗೂ ಒಕ್ಕೂಟದ ಪ್ರಗತಿಗೆ ಮುಂದಾಗಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು. ಜಿಲ್ಲೆಯ ಕೊಳ್ಳೇಗಾಲದ ಕರ್ನಾಟಕ ರಾಜ್ಯ ಸಕಾರಿ ನೌಕರರ ಸಭಾಂಗಣದದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಚಾ.ನಗರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಶುದ್ದ ಹಾಲು ಶೇಖರಣೆ, ಲೆಕ್ಕ ಪುಸ್ತಕ ದಾಖಲಾತಿ ನಿರ್ವಹಣೆ ಕುರಿತು ನಡೆದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಡೇರಿಗಳ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿರುವ ಡೇರಿಗಳ ಕಾರ್ಯನಿರ್ವಾಹಕರು, ಆಡಳಿತ ಮಂಡಲಿಗೆ ಯಾರೇ ಬಂದರು ಅವರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಂಘದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಅವರಿಗೆ ಕಾಲ ಕಾಲಕ್ಕೆ ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ಇತರೇ ಖರ್ಚುಗಳ ಬಗ್ಗೆ ಚರ್ಚಿಸುವುದು. ಗುಣಮಟ್ಟ ಹಾಗೂ ಪರಿಶುದ್ದ ಹಾಲು ಶೇಖರಣೆ ನಿಮ್ಮ ಮೊದಲ ಆದ್ಯತೆಯಾಗಬೇಕು. ಆದಾಗ ಮಾತ್ರ ಡೇರಿ ಲಾಭ ಕಾಣಲು ಸಾಧ್ಯವಿದೆ. ನಿಮ್ಮೆಲ್ಲರ ಹಿತ ಕಾಯಲು ಜಿಲ್ಲಾ ಸಹಕಾರ ಯೂನಿಯನ್ , ಒಕ್ಕೂಟ ಸದಾ ಬದ್ಧವಾಗಿದೆ ಎಂದರು.ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಬಲವರ್ಧನೆ ಮತ್ತು ಉತ್ತಮ ಕಾರ್ಯನಿರ್ವಣೆಗೆ ಕಾರ್ಯಗಾರ ಸೂಕ್ತವಾಗಿದೆ. ಯುವಕರಿಗೆ ಈ ಶಿಬಿರಗಳು ವೃತ್ತಿ ನೈರ್ಪುಣ್ಯತೆಯನ್ನು ಹೆಚ್ಚಿಸುತ್ತದೆ. ಸಹಕಾರ ಇಲಾಖೆ ಮತ್ತು ಕಾಯ್ದೆಗೆ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವವರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದಾರೆ. ಅವರ ಅನುಭವ ಮತ್ತು ಸಂಘದ ನಿರ್ವಹಣೆಗೆ ಬಗ್ಗೆ ತಿಳಿದು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಿದೆ ಎಂದರು.
ಕೆಎಂಎಫ್ನ ನಿವೃತ್ತ ಹಿರಿಯ ಉಪ ನಿರ್ದೇಶಕ ಆರ್.ರಾಜಣ್ಣ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ವಿ. ಶೈಲೇಂದ್ರ ಸಹಕಾರಿ ಸಂಘಗಳ ಜವಾಬ್ದಾರಿ ಲೆಕ್ಕ ಪತ್ರಗಳ ನಿರ್ವಹಣೆ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ರಾಯಪ್ಪನ್, ನಿರ್ದೇಶಕರಾದ ಪಿ. ಮಹದೇವಸ್ವಾಮಿ, ಜಯಶೀಲಾ, ಹಾಲು ಒಕ್ಕೂಟದ ನಿರ್ದೇಶಕರಾದ ಎಂ. ನಂಜುಂಡಸ್ವಾಮಿ, ಶೀಲಾ ಪುಟ್ಟರಂಗಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್, ಉಪ ವ್ಯವಸ್ಥಾಪಕ ಶರತ್ಕುಮಾರ್, ವಿಸ್ತರಣಾಧಿಕಾರಿ ಬಿ. ಸೋಮಶೇಖರ್, ಮ್ಯಾನೇಜರ್ ಮಲ್ಲಿಕಾರ್ಜುನ್, ಹಾಗೂ ಡೇರಿಗಳ ಕಾರ್ಯನಿರ್ವಹಕರು ಉಪಸ್ಥಿತರಿದ್ದರು.