ಸಾರಾಂಶ
ಪ್ರತಿಭಾವಂತರಿಗೆ ಶಿಕ್ಷಣ ಮರೀಚಿಕೆಯಾದ ಒಂದು ಕಾಲದಲ್ಲಿಯೂ ಸ್ವಪ್ರಯತ್ನದಿಂದ ಸಾಧಿಸಿದ ಹಲವು ಸಾಧಕರ ಚರಿತ್ರೆ ನಮ್ಮ ಕಣ್ಮುಂದಿರುವಾಗ, ಈಗ ಮನೆ ಬಾಗಿಲಲ್ಲೆ ಶಿಕ್ಷಣ ದೊರೆಯುತ್ತಿವೆ. ಪ್ರತಿಭೆಯನ್ನು ಬೆಳಗಲು ಅತ್ಯುತ್ತಮ ಅವಕಾಶವಾಗಿದ್ದು, ಕನ್ನಡಪ್ರಭ ಯುವ ಆವೃತ್ತಿ ಇನ್ನಷ್ಟು ಸ್ಫೂರ್ತಿದಾಯಕವಾಗಿದೆ
ಹಾನಗಲ್ಲ: ಪತ್ರಿಕೆಗಳಲ್ಲಿನ ಸುದ್ದಿಗಳನ್ನು ಓದಿ ಜಗತ್ತಿನ ಜ್ಞಾನ ಪಡೆಯುವುದರ ಜತೆ ಕನ್ನಡಪ್ರಭ ದಿನಪತ್ರಿಕೆ ವಿದ್ಯಾರ್ಥಿಗಳು ಹಾಗೂ ಯುವಕರಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಪತ್ರಿಕೆಯನ್ನು ಶಾಲೆಗೆ ತಲುಪಿಸುತ್ತಿರುವುದು ನಿಜಕ್ಕೂ ಅತ್ಯುತ್ತಮ ಕಾರ್ಯ. ಇದರ ಸದುಪಯೋಗ ವಿದ್ಯಾರ್ಥಿಗಳಿಂದಾಗಬೇಕು. ಈ ಮೂಲಕ ಪತ್ರಿಕೆಗಳನ್ನು ಓದುವ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ ಎಚ್.ಎಚ್. ರವಿಕುಮಾರ ತಿಳಿಸಿದರು.
ಇಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿ, ಎಲ್ಲ ಕಾಲಕ್ಕೂ ಸಲ್ಲುವಂತಹ ನಮ್ಮ ನಡೆ ನುಡಿ ಆಚಾರ ವಿಚಾರಗಳು ಸಾಮಾಜಿಕ ಗೌರವಕ್ಕೆ ಪಾತ್ರವಾಗಬೇಕು ಎಂದರು.ಪ್ರತಿಭಾವಂತರಿಗೆ ಶಿಕ್ಷಣ ಮರೀಚಿಕೆಯಾದ ಒಂದು ಕಾಲದಲ್ಲಿಯೂ ಸ್ವಪ್ರಯತ್ನದಿಂದ ಸಾಧಿಸಿದ ಹಲವು ಸಾಧಕರ ಚರಿತ್ರೆ ನಮ್ಮ ಕಣ್ಮುಂದಿರುವಾಗ, ಈಗ ಮನೆ ಬಾಗಿಲಲ್ಲೆ ಶಿಕ್ಷಣ ದೊರೆಯುತ್ತಿವೆ. ಪ್ರತಿಭೆಯನ್ನು ಬೆಳಗಲು ಅತ್ಯುತ್ತಮ ಅವಕಾಶವಾಗಿದ್ದು, ಕನ್ನಡಪ್ರಭ ಯುವ ಆವೃತ್ತಿ ಇನ್ನಷ್ಟು ಸ್ಫೂರ್ತಿದಾಯಕವಾಗಿದೆ ಎಂದರು.
ಮುಖ್ಯೋಪಾಧ್ಯಾಯ ಚಂದ್ರಶೇಖರ ಲಂಗಟಿ ಮಾತನಾಡಿ, ಪಾಠ ಮಾತ್ರವಲ್ಲ ಪಠ್ಯೇತರವಾಗಿಯೂ ಬೆಳೆದಾಗ ಮಾತ್ರ ವಿದ್ಯಾರ್ಥಿ ಉತ್ತಮ ಸಾಧನೆ ಮಾಡಬಲ್ಲ. ಕನ್ನಡಪ್ರಭ ಯುವ ಆವೃತ್ತಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹಾಗೂ ಪಠ್ಯ ಜ್ಞಾನವನ್ನೂ ನೀಡುತ್ತಿದೆ. ಇದರಿಂದ ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಇಮ್ಮಡಿಗೊಳ್ಳುತ್ತದೆ. ಪತ್ರಿಕೆ ಓದುವ ಹವ್ಯಾಸಕ್ಕೂ ಇದು ಪ್ರೇರಣೆಯಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಕನ್ನಡ ಅಧ್ಯಾಪಕ ನಿರಂಜನ ಗುಡಿ ಮಾತನಾಡಿದರು. ಮಾರುತಿ ಶಿಡ್ಲಾಪುರ ಇತರರು ಇದ್ದರು.