ಸಾರಾಂಶ
ಡಂಬಳ: ಐತಿಹಾಸಿಕ ಕೆರೆಗಳ ಅಭಿವೃದ್ಧಿಗೆ ಶಾಸಕ ಜಿ.ಎಸ್.ಪಾಟೀಲ ನೀಲನಕ್ಷೆ ತಯಾರಿಸಿದ್ದು, ಅಲ್ಲದೇ ಡಂಬಳ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಸೂಕ್ತ ಯೋಜನೆ ರೂಪಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಡಂಬಳ ಗ್ರಾಮದ ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಸರ್ಕಾರ ₹100 ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು. ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಏತ ನೀರವಾವರಿ ಮೂಲಕ ಡಂಬಳದ ಪುರಾತನ ಐತಿಹಾಸಿಕ ಕೆರೆ ತುಂಬಿದ್ದು ಎಲ್ಲರಿಗೂ ಸಂತೋಷ ತಂದಿದೆ. ಏತ ನೀರಾವರಿ ಯೋಜನೆಯ ಮೂಲಕ ಎಲ್ಲರ ಸಹಕಾರದಿಂದ ಹೀರೆವಡ್ಡಟ್ಟಿ, ಬಸಾಪುರ, ತಾಮ್ರಗುಂಡಿ ಕೆರೆ ಸೇರಿದಂತೆ ಜಿಲ್ಲೆಯ ಎಲ್ಲ ಕೆರೆಗೆಳು ತುಂಬಿಸಿ ರೈತರಿಗೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ತಾಲೂಕಾಡಳಿತದಿಂದ ವಿಧವಾ ವೇತನ, ವೃದ್ಯಾಪ ವೇತನ, ಸಂದ್ಯಾ ಸುರಕ್ಷತಾ ಸೇರಿದಂತೆ ಹಲವಾರು ಜನಪರ ಯೋಜನೆ ನೀಡಲಾಗಿದೆ ಹಾಗೂ ಬಹಳ ದಿನದಿಂದ ಬಾಕಿ ಉಳಿದ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿದ ರೈತರಿಗೆ ಇಂದು ಆರ್ ಟಿ ಸಿ ನೀಡುವುದು ಹಾಗೂ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರಸ್ತೆ ಕಾಮಗಾರಿ, ಶಾಲೆಗಳ ರಿಪೇರಿ ಸೇರಿದಂತೆ ಅವಶ್ಯಕ ಕೆಲಸ ಆರಂಭಿಸಲಾಗಿದೆ. ಪಂಶುಸಂಗೋಪನೆ ಇಲಾಖೆಯಿಂದ ದನಕರಗಳ ಆರೋಗ್ಯ ದೃಷ್ಟಿಯಿಂದ ಆ್ಯಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆ ಎಂದರು.ಸರ್ಕಾರದ ಪಂಚ ಗ್ಯಾರಂಟಿಗಳಿಗೆ ₹58000 ಕೋಟಿ ಅನುದಾನ ಮೀಸಲಿಡಲಾಗಿದೆ, ಹಾಗೆಯೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ. ಬಡವರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾದ ಪಂಚ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ತಹಸೀಲ್ದಾರ ಎರಿಸ್ವಾಮಿ ಪಿ.ಎಸ್. ಮಾತನಾಡಿ, ಸರ್ಕಾರದ ಅತ್ಯುತ್ತಮ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಜನಸ್ಪಂದನ, ಉತಾರಗಳಿಗೆ ಆಧಾರ್ ಜೋಡಣೆ, ಪೋಡಿ ದುರಸ್ತಿ ಸೇರಿದಂತೆ ಅನೇಕ ಯೋಜನೆ ನೀಡಲಾಗಿದೆ ಅವುಗಳನ್ನು ಎಲ್ಲರು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ಪ್ರತಿಯೊಬ್ಬ ರೈತ ಕಾರ್ಮಿಕರು ಮುಖ್ಯವಾಹಿನಿಗೆ ಬರಬೇಕು ಎಂದು ಕೆರೆಗಳನ್ನು ಭರ್ತಿ ಮಾಡಿದ ಶ್ರೇಯಸ್ಸು ಸಚಿವ ಎಚ್.ಕೆ.ಪಾಟೀಲ, ಶಾಸಕ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ,ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಶೋಭಾ ಮೇಟಿ, ಗೋಣಿಬಸಪ್ಪ ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಬಾಬುಸಾಬ್ ಮೂಲಿಮನಿ, ಬಸವರಾಜ ಪೂಜಾರ, ಸೋಮಣ್ಣ ಗುಡ್ಡದ, ಶರಣು ಬಂಡಿಹಾಳ, ಪುಲಕೇಶಗೌಡ ಪಾಟೀಲ್, ಮರಿಯಪ್ಪ ಸಿದ್ಧಣ್ಣವರ, ಅಬ್ದುಲ್ ಕಲಕೇರಿ, ಜಾಕೀರ ಮೂಲಿಮನಿ, ಭೀಮಪ್ಪ ಗದಗಿನ, ಕುಮಾರಸ್ವಾಮಿ ಹಿರೇಮಠ, ಸುರೇಶ ಗಡಗಿ, ಕನಕಮೂರ್ತಿ ನರೇಗಲ್ಲ, ಅಶೋಕ ಹಡಪದ, ಮಳ್ಳಪ್ಪ ಒಂಟಲಭೋವಿ, ಮರಿತೇಮಪ್ಪ ಆದಮ್ಮನ್ನವರ, ಇಒ ವಿಶ್ವನಾಥ ಹೊಸಮನಿ, ಪಿಡಬ್ಲುಡಿ ನಾಗೇಂದ್ರ ಪಟ್ಟಣಶೆಟ್ಟರ್, ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ, ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ರೈತರು, ಕಾರ್ಯಕರ್ತರು ಇದ್ದರು.