6 ಕೋಟಿ ವೆಚ್ಚದಲ್ಲಿ ಹುಲಿಕೇರಿ ಇಂದಿರಮ್ಮನ ಕೆರೆ ಅಭಿವೃದ್ಧಿ: ಲಾಡ್‌

| Published : Nov 23 2024, 12:33 AM IST

ಸಾರಾಂಶ

ಐದು ಸಾವಿರ ಎಕರೆಗೆ ಕೆರೆಯ ನೀರು ಉಪಯೋಗವಾಗಲಿದೆ. ರೈತರಿಗೆ ಬೆಳೆ ಬೆಳೆಯಲು ಕೆರೆ ನೀರು ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ರೈತರಿಗೆ ನೀರು ಸರಬರಾಜು ಆಗುತ್ತದೆ.

ಅಳ್ನಾವರ:

ತಾಲೂಕಿನ ಹುಲಿಕೇರಿಯ ಇಂದಿರಮ್ಮನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ₹ 6 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಕೆರೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಮಾಡಿದ ಅವರು, ಕಾಮಗಾರಿಯ ವೇಳೆ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿಯನ್ನು 9 ತಿಂಗಳ ಅವಧಿಯೊಳಗೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಐದು ಸಾವಿರ ಎಕರೆಗೆ ಕೆರೆಯ ನೀರು ಉಪಯೋಗವಾಗಲಿದೆ. ರೈತರಿಗೆ ಬೆಳೆ ಬೆಳೆಯಲು ಕೆರೆ ನೀರು ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ರೈತರಿಗೆ ನೀರು ಸರಬರಾಜು ಆಗುತ್ತದೆ ಎಂದರು.

ಈ ವೇಳೆ ತಹಸೀಲ್ದಾರ್‌ ಬಸವರಾಜ ಬೆಣ್ಣಿಶಿರೋರ, ತಾಲೂಕು ಮಟ್ಟದ ಅಧಿಕಾರಿಗಳು, ಹುಲಿಕೇರಿ ಗ್ರಾಮಸ್ಥರು ಭಾಗವಹಿಸಿದ್ದರು.

ನಾಲ್ಕು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಕೆರೆಯ ಸೇತುವೆಯ ಕಾಲುವೆ ಒಡೆದಿತ್ತು. ಎರಡು ವರ್ಷದ ಹಿಂದೇ ಈ ಕಾಲುವೆ ಸುಧಾರಣೆಗೆ ಟೆಂಡರ್‌ ಆಗಿತ್ತು. ಆದರೆ, ಗುತ್ತಿಗೆದಾರ ಕಾಮಗಾರಿ ಆರಂಭಿಸದೇ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು. ಈ ಕುರಿತು ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿ ವಾಹಿನಿ ವಿಶೇಷ ವರದಿ ಸಹ ಮಾಡಿತ್ತು. ಇದೀಗ ಮರು ಟೆಂಡರ್‌ ಕರೆದು ಕಾಮಗಾರಿಗೆ ಮರು ಚಾಲನೆ ನೀಡಲಾಯಿತು.